ರಾಯಬಾಗ: ಕೊರೋನಾ ಎಫೆಕ್ಟ್ ಹೊರನಾಡಿನಲ್ಲಿರುವ ಕನ್ನಡಿಗರಿಗೆ ತಟ್ಟಿದ್ದು, ಉದ್ಯೋಗ ಅರಿಸಿ ಗೋವಾಕ್ಕೆ ಹೋಗಿರುವ ಮೂರು ಕುಟುಂಬಗಳಿಗೆ ಅನ್ನ, ಆಶ್ರಯಕ್ಕಾಗಿ ಪರದಾಡುವಂತಾಗಿದೆ.
ತಾಲೂಕಿನ ನಿಡಗುಂದಿ ಗ್ರಾಮ ಲಕ್ಷ್ಮಣ ಭಜಂತ್ರಿ ಕುಟುಂಬ ಸೇರಿದಂತೆ ಮೂರು ಕುಟುಂಬಗಳು ಉದ್ಯೋಗವನ್ನು ಅರಿಸಿಕೊಂಡು ಗೋವಾಕ್ಕೆ ಹೋಗಿದ್ದು, ಈಗ ಕೊರೋನಾ ಎಫೆಕ್ಟ್ ನಿಂದ ದೇಶದ್ಯಾಂತ ಲಾಕ್ಡೌನ್ ಇರುವುದರಿಂದ ಗೋವಾದಲ್ಲಿ ಅನ್ನ, ಆಶ್ರಯವಿಲ್ಲದೇ ಪರದಾಡುತ್ತಿದ್ದು, ತಮಗೆ ಸಹಾಯ ಮಾಡುವಂತೆ ಕುಡಚಿ ಶಾಸಕ ಪಿ.ರಾಜೀವ ಅವರಿಗೆ ವಿಡಿಯೋ ಮೂಲಕ ಸಹಾಯ ಕೋರಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಲೂಕಿನ ಬಹಳಷ್ಟು ಬಡ ಕುಟುಂಬಗಳು ತಮ್ಮ ಹೊಟ್ಟಿಪಾಡಿಗಾಗಿ ಉದ್ಯೋಗವನ್ನು ಅರಿಸುತ್ತ ನೆರೆ ರಾಜ್ಯ ಗೋವಾಕ್ಕೆ ಹೋಗುತ್ತಾರೆ. ಆರು ತಿಂಗಳ ಗೋವಾದಲ್ಲಿ ಉದ್ಯೋಗ ಮಾಡಿ, ಇನ್ನುಳಿದ ಆರು ತಿಂಗಳು ತಮ್ಮ ಗ್ರಾಮಗಳಲ್ಲಿ ಇರುತ್ತಾರೆ.
ಗೋವಾಕ್ಕೆ ಉದ್ಯೋಗ ಅರಿಸಿ ಹೋಗಿರುವ ಭಜಂತ್ರಿ ಕುಟುಂಬವು ಲಾಕ್ಡೌನ್ನಿಂದಾಗಿ ತಮ್ಮ ಸ್ವಗ್ರಾಮ ನಿಡಗುಂದಿಗೆ ಬರಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿಕೊಂಡಿದೆ. ಈಗ ಅಲ್ಲಿ ಉದ್ಯೋಗವಿಲ್ಲದೇ, ಕೈಯಲ್ಲಿದ್ದ ಹಣವೆಲ್ಲವೂ ಖರ್ಚಾಗಿದ್ದರಿಂದ ಅನ್ನ, ಆಶ್ರಯಕ್ಕಾಗಿ ಪರದಾಡುವಂಥ ಪರಿಸ್ಥಿತಿ ಉಂಟಾಗಿದ್ದು, ತಮಗೆ ಸಹಾಯ ಮಾಡುವಂತೆ ಕ್ಷೇತ್ರದ ಕುಡಚಿ ಶಾಸಕರಿಗೆ ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.
ಉದ್ಯೋಗ ಅರಿಸಿ ನೆರೆ ಗೋವಾ ರಾಜ್ಯಕ್ಕೆ ಹೋಗಿ ಅನ್ನ, ಆಶ್ರಯಕ್ಕಾಗಿ ಕಷ್ಟ ಪಡುತ್ತಿರುವ ಕುಡಚಿ ಕ್ಷೇತ್ರದ ನಿಡಗುಂದಿ ಗ್ರಾಮದ ಭಜಂತ್ರಿ ಕುಟುಂಬಗಳ ನೆರವಿಗೆ ಶಾಸಕರು ಬರಲಿ ಎಂಬುವುದೇ ಎಲ್ಲ ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.
Advertisement