ಬೆಂಗಳೂರು: ಲಾಕ್ ಡೌನ್ ನಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳು ಆದಾಯವಿಲ್ಲದೇ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ಎದುರಾಗಿರುವ ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಯ ವೇತನವನ್ನು ಸರ್ಕಾರದಿಂದಲೇ ನೀಡಲು ನಿರ್ಧರಿಸಲಾಗಿದೆ.
ಪ್ರಥಮ ಹಂತದ ಲಾಕ್ ಡೌನ್ ವೇಳೆ ಸಾರಿಗೆ ಇಲಾಖೆಗೆ ಉಂಟಾಗಿರುವ ನಷ್ಟ 1200 ಕೋಟಿ ನಷ್ಟ,ಕೆಎಸ್ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಹಾಗು ವಾಯುವ್ಯ ಸಾರಿಗೆ ನಿಗಮಗಳಿಗೆ ಆದಾಯವೇ ಇಲ್ಲದಂತಾಗಿದೆ, ಪ್ರಯಾಣಿಕರ ಟಿಕೆಟ್ ಹಣವೇ ಸಿಬ್ಭಂದಿ ವೇತನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಬಸ್ ಸಂಚಾರ ಇಲ್ಲದೇ ಆದಾಯವೇ ಇಲ್ಲವಾಗಿದೆ. ಆದರೆ ನಮ್ಮ ಜನರ ಹಾಗೂ ಸಿಬ್ಬಂದಿಗಳ ಪ್ರಾಣಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನಕ್ಕೆ ಸಮಸ್ಯೆಯಾಗದಂತೆ ಸರ್ಕಾರದಿಂದಲೇ ವೇತನ ಪಾವತಿ ಮಾಡಲಾಗುವುದು ಎಂದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಯ ನೀಡಿದ್ದು ವೇತನ ಕಡಿತದಂತಹ ಭೀತಿಯಲ್ಲಿದ್ದ ಸಾರಿಗೆ ನಿಗಮದ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಒಟ್ಟಿಗೆ 3 ತಿಂಗಳ ವೇತನ ನೀಡಲು 1050 ಕೋಟಿ.ರೂ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯಕ್ಕೆ 1 ತಿಂಗಳ ವೇತನ ಪಾವತಿಗೆ ಮುಖ್ಯಮಂತ್ರಿಗಳು ತಾತ್ವಿಕ ಅನುಮತಿ ನೀಡಿದ್ದಾರೆ. ಹಾಗಾಗಿ ಸಾರಿಗೆ ನಿಗಮಗಳ ಸಿಬ್ಬಂದಿ ವೇತನ ಪಾವತಿ ವಿಚಾರದಲ್ಲಿ ಆತಂಕಗೊಳ್ಳುವುದು ಬೇಡ, ನಿಗದಿಯಂತೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಲಾಗುತ್ತದೆ. ಸಾರಿಗೆ ಬಸ್ ಗಳ ಸಂಚಾರ ಪೂರ್ಣ ಒ್ರಮಟಣದಲ್ಲಿ ಕಾರ್ಯಾಚರಣೆ ಆರಂಭಿಸಲು ವಿಳಂಬವಾಗಬಹುದು ಆದರೂ ಮುಂದಿನ ಎರಡು ತಿಂಗಳ ವೇತನವನ್ನು ಮುಂದಿನ ದಿನಗಳಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಭಯ ನೀಡಿದ್ದಾರೆ.
ಸಾರಿಗೆ ಇಲಾಖೆ ಮೇಲೆ ಕೊರೋನಾ ಹೊಡೆತ
ಇನ್ನು ಕೊರೊನಾ ವೈರಸ್ನ ಪ್ರಭಾವ ಎಲ್ಲ ಕ್ಷೇತ್ರಗಳ ಮೇಲೆ ಬಿದ್ದಿದ್ದು, ರಾಜ್ಯ ರಸ್ತೆ ಸಾರಿಗೆಯ ಸಿಬ್ಬಂದಿಗೆ ವೇತನಕ್ಕೂ ತತ್ವಾರ ಉಂಟಾಗಿದೆ. ಪ್ರಯಾಣಿಕರನ್ನೇ ಅವಲಂಭಿಸಿದ್ದ ನಾಲ್ಕು ನಿಗಮಗಳಿಗೆ ಲಾಕ್ಡೌನ್ನಿಂದ ಹಣಕಾಸಿನ ಅಭಾವ ಉಂಟಾಗಿದ್ದು, ಸಿಬ್ಬಂದಿಗೆ ಏಪ್ರಿಲ್ ತಿಂಗಳ ವೇತನ ನೀಡುವುದೋ ಬೇಡವೋ ಎಂಬ ಗೊಂದಲದಲ್ಲಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಸಂಕಷ್ಟ ಅನುಭವಿಸುತ್ತಿವೆ. ಈ ನಾಲ್ಕು ನಿಗಮಗಳಿಗೆ ಬಸ್ ಪ್ರಯಾಣಿಕರ ಟಿಕೆಟ್ ಹಣ ಬಿಟ್ಟು ಬೇರೆ ಅನುದಾನದ ಮೂಲವಿಲ್ಲ. ದಿನನಿತ್ಯ ಸುಮಾರು ಒಂದು ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಆದರೆ, ಈಗ ಸಿಬ್ಬಂದಿಗೆ ವೇತನ ನೀಡುವಷ್ಟು ಯಾವ ನಿಗಮದಲ್ಲೂ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ನಾಲ್ಕು ನಿಗಮಗಳಲ್ಲಿ ಸುಮಾರು 1.2 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಬಿಎಂಟಿಸಿಯ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರತಿಕ್ರಿಯಿಸಿದ್ದು, ಮಾರ್ಚ್ ತಿಂಗಳ ವೇತನ ನೀಡಲು ನಾವು ಸಮರ್ಥರಾಗಿದ್ದೇವೆ. ಏಕೆಂದರೆ ಮಾರ್ಚ್ 21ರವರೆಗೆ ಬಸ್ಗಳು ಕಾರ್ಯನಿರ್ವಹಿಸಿವೆ. ಅದರ ಜೊತೆ ಸಬ್ಸಿಡಿ ರೂಪದಲ್ಲಿ ಸರಕಾರವು ಸಹ ಅನುದಾನ ನೀಡಿದೆ. ಆದರೆ, ಏಪ್ರಿಲ್ ತಿಂಗಳಲ್ಲಿ ಯಾವುದೇ ಬಸ್ಗಳು ರಸ್ತೆಗಿಳಿದಿಲ್ಲ. ಸರಕಾರದ ಸಹಾಯವಿಲ್ಲದೇ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗುವುದಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡಿದ್ದರು.
Advertisement