ಮಾನವೀಯತೆ ಮೆರೆದ ಧಾರವಾಡ ಪಿಎಸ್‍ಐ: ಸ್ವಂತ ಖರ್ಚಿನಿಂದ 2.50 ಲಕ್ಷ ರೂ. ಮೌಲ್ಯದ ದಿನಸಿ ವಿತರಣೆ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜನಸಂದಣಿ ಆಗದಂತೆ ಎಚ್ಚರವಹಿಸಿ ಲಾಕ್ ಡೌನ್ ಯಶಸ್ವಿಗೊಳಿಸಲು ನಿತ್ಯ ಹಗಲಿರಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ಕರ್ತವ್ಯದೊಂದಿಗೆ ಮಾನವೀಯತೆ ಮೆರೆದಿದ್ದಾರೆ.
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ

ಧಾರವಾಡ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜನಸಂದಣಿ ಆಗದಂತೆ ಎಚ್ಚರವಹಿಸಿ ಲಾಕ್ ಡೌನ್ ಯಶಸ್ವಿಗೊಳಿಸಲು ನಿತ್ಯ ಹಗಲಿರಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ಕರ್ತವ್ಯದೊಂದಿಗೆ ಮಾನವೀಯತೆ ಮೆರೆದಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಆಗಿರುವ ಮಹೇಂದ್ರ ನಾಯಕ್ ಅವರು ಸುಮಾರು 2.50 ಲಕ್ಷ ಮೌಲ್ಯದ ದಿನಸಿಯನ್ನು ತಮ್ಮ ಸ್ವಂತ ಹಣದಲ್ಲಿ ಠಾಣಾ ವ್ಯಾಪ್ತಿಯ ಅಸಹಾಯಕರಿಗೆ ಹಂಚಿದ್ದಾರೆ. ಮೂಲತಃ ವಿಜಯಪುರ ತಾಲೂಕಿನ ಐನಾಪುರ ತಾಂಡಾದ ನಿವಾಸಿಯಾದ ಅವರು ಬಡತನದ ಹಿನ್ನೆಲೆಯಿಂದ ಬಂದಿದ್ದರೂ ಹಸಿದವರಿಗೆ, ಅಸಹಾಯಕರಿಗೆ ನಿತ್ಯ ನೆರವಾಗುತ್ತಿದ್ದಾರೆ.

ತಮ್ಮ ಠಾಣೆಯ ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿ, ಬೀಟ್ ಪೊಲೀಸರ ಸಹಾಯದಿಂದ ಆಯಾ ಗ್ರಾಮಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರು, ಇಟ್ಟಂಗಿ ಭಟ್ಟಿ ಕಾರ್ಮಿಕರು, ಕೂಲಿಕಾರ್ಮಿಕರು, ಮಕ್ಕಳಿಲ್ಲದ ವಯೋವೃದ್ಧರು ಮತ್ತು ಪಡಿತರ ಚೀಟಿ ಹೊಂದಿರದೆ ಯಾವುದೇ ಸೌಲಭ್ಯ ಪಡೆಯದೆಯಿರುವ ಕುಟುಂಬಗಳನ್ನು ಗುರುತಿಸಿ,ತಮ್ಮ ಸಿಬ್ಬಂದಿಗಳ ಸಹಾಯದಿಂದ ತಮ್ಮದೆ ವಾಹನದಲ್ಲಿ ನೇರವಾಗಿ ಅಸಹಾಯಕರ ಮನೆಗೆ ತಲುಪಿಸಿದ್ದಾರೆ.  ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಅವರು ಪಿಎಸ್‍ಐ ಮಹೇಂದ್ರ ನಾಯಕ್ ಅವರ ಕಾರ್ಯ ಮೆಚ್ಚಿ, ಅಮ್ಮಿನಭಾವಿ ಗ್ರಾಮದಲ್ಲಿ ದಿನಸಿ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಅವರ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ಸಹಾಯ ,ಸಹಕಾರದಿಂದ ಧಾರವಾಡ ಗ್ರಾಮೀಣ ವ್ಯಾಪ್ತಿಯ ಮಾವಿನಕೊಪ್ಪ, ಹುಣಸಿಕುಮರಿ, ಲಾಳಗಟ್ಟಿ, ವಡವನಾಗಲಾವಿ, ಇಟಿಗಟ್ಟಿ, ಶಿವಳ್ಳಿ, ಹಳ್ಳಿಗೇರಿ, ಯರಿಕೊಪ್ಪ, ನರೇಂದ್ರ, ಕ್ಯಾರಕೊಪ್ಪ, ನಿಗದಿ ಮತ್ತು ಅಮ್ಮಿನಭಾವಿ ಸೇರಿದಂತೆ ಸುಮಾರು 20 ಹಳ್ಳಿಯ ಅತಿ ಬಡವ ಮತ್ತು ಅಸಹಾಯಕ 300 ಕುಟುಂಬಗಳಿಗೆ ರವೆ, ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳು ಸೇರಿದಂತೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ.

ಧಾರವಾಡ ತಾಲೂಕಿನ 20 ಹಳ್ಳಿಗಳ 300 ಕುಟುಂಬಗಳಿಗೆ ಒಟ್ಟು 3 ಕ್ವಿಂಟಲ್ ರವೆ, 3 ಕ್ವಿಂಟಲ್ ಬೆಲ್ಲ, 5 ಕ್ವಿಂಟಲ್ ಅಕ್ಕಿ 250 ಲೀಟರ್ ಅಡುಗೆ ಎಣ್ಣೆ ಮತ್ತು ಸುಮಾರು 20 ಸಾವಿರ ಸಂತೂರ್ ಸಾಬೂನುಗಳನ್ನು ಹಂಚಿದ್ದಾರೆ.

ಇದಲ್ಲದೆ ಮಹೇಂದ್ರ ಅವರು ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಸಹಾಯದಿಂದ ತಮ್ಮ ಸ್ವಂತ ಊರು ವಿಜಯಪುರ ತಾಲೂಕಿನ ಐನಾಪುರ ತಾಂಡ ಸೇರಿದಂತೆ ವಿಜಯಪುರ ಹಾಗೂ ಚಡಚಣ ತಾಲೂಕಿನ 15 ಹಳ್ಳಿಯ ಕೂಲಿಕಾರ್ಮಿಕರಿಗೆ, ಅಸಹಾಯಕರಿಗೆ, ಬಡವರಿಗೆ ಆಹಾರದ ಕಿಟ್ ವಿತರಿಸಿದ್ದಾರೆ.  ಪ್ರತಿ ಕಿಟ್‍ದಲ್ಲಿ 5ಕೆಜಿ ರವೆ, 5ಕೆಜಿ ಅಕ್ಕಿ ಮತ್ತು 2 ಕೆಜಿ ಬೆಲ್ಲ ಸೇರಿ ಅಡುಗೆ ಎಣ್ಣೆ ಕಾಳು ನೀಡಿದ್ದಾರೆ.

ಕರ್ತವ್ಯದ ಮದ್ಯದಲ್ಲೂ ತಮ್ಮ ಸಹಾಯಕ ಸಿಬ್ಬಂದಿಗಳ ಸಹಾಯ ಹಾಗೂ ಸಹಕಾರದಿಂದ ಅಗತ್ಯ ವಿರುವವರಿಗೆ ತಮ್ಮ ಸ್ವಂತ ಹಣದಿಂದ , ತಮ್ಮದೆ ವಾಹನದಲ್ಲಿ ದಿನಸಿ, ಆಹಾರ ದಾನ್ಯಗಳನ್ನು ವಿತರಿಸಿಸುವ ಮೂಲಕ ಜನರ ಸೇವೆ ಮಾಡುತ್ತಿರುವ ಪಿಎಸ್‍ಐ ಮಹೇಂದ್ರ ನಾಯಕ್ ಇತರರಿಗೆ ಮಾದರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com