ಬೆಂಗಳೂರು: ಪುಸ್ತಕ ಓದುವ ಅಭ್ಯಾಸ ಉತ್ತಮ ಹವ್ಯಾಸಗಳಲ್ಲಿ ಒಂದು. ಪುಸ್ತಕ ಓದುವ ಅಭ್ಯಾಸವಿದ್ದರೆ ಜ್ಞಾನವೂ ಹೆಚ್ಚುತ್ತದೆ, ವ್ಯಕ್ತಿಯಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ, ಕೆಟ್ಟ ಯೋಚನೆಗಳು ಬರುವುದಿಲ್ಲ. ಸಮಯ ಕಳೆಯಲು ಮನುಷ್ಯನ ಒಂದು ಉತ್ತಮ ಸಂಗಾತಿ ಪುಸ್ತಕಗಳು. ಇದು ಅನುಭವಸ್ಥರು ಹೇಳುವ ಮಾತು.
ರಾಜಕಾರಣವೆಂದರೆ ಒತ್ತಡದ ಕೆಲಸ, ದಿನದ 24 ಗಂಟೆಯೂ ಸದಾ ಒಂದಿಲ್ಲೊಂದು ವಿಚಾರ, ಮಾತುಕತೆ. ಓಡಾಟಗಳಲ್ಲಿ ರಾಜಕಾರಣಿಗಳಿರುತ್ತಾರೆ. ಈ ಮಧ್ಯೆ ಅನೇಕ ರಾಜಕಾರಣಿಗಳಿಗೆ ಓದುವ ಹವ್ಯಾಸವಿರುತ್ತದೆ. ತಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಲು, ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳಲು, ಉತ್ತಮ ವಾಗ್ಮಿಗಳಾಗಲು ಪುಸ್ತಕಗಳಿಗೆ ರಾಜಕಾರಣಿಗಳು ಮೊರೆಹೋಗುತ್ತಾರೆ.
ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಹ ಪುಸ್ತಕಪ್ರಿಯರು. ಇದನ್ನು ಅವರೇ ಹೇಳಿಕೊಂಡಿದ್ದಾರೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಉತ್ತಮ ಪುಸ್ತಕ ಓದಿ ಸಮಯ ಕಳೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇಂದು ವಿಶ್ವ ಪುಸ್ತಕ ದಿನದ ಶುಭಾಶಯಗಳನ್ನು ತಿಳಿಸಿದ ಅವರು, ನನ್ನ ಮನೆಯಲ್ಲಿ ಪುಟ್ಟ ಖಾಸಗಿ ಲೈಬ್ರೆರಿಯಿದೆ. ಅಲ್ಲಿ ನೂರಾರು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಸಂಗ್ರಹವಿದೆ ಎಂದು ಹೇಳಿಕೊಂಡಿದ್ದಾರೆ.
ಪುಸ್ತಕ ಮೇಳಗಳಿಗೆ ಹೋಗಿ ನನಗಿಷ್ಟವಾದ ಪುಸ್ತಕಗಳನ್ನು ಖರೀದಿಸುವ ಅಭ್ಯಾಸವಿದೆ.ಪುಸ್ತಕ ಓದಿದ ನಂತರ ಇಷ್ಟದ ಲೇಖಕರೊಂದಿಗೆ ಚರ್ಚಿಸುವ ಅಭ್ಯಾಸವೂ ಇದೆ ಎಂದು ಹೇಳಿಕೊಂಡಿದ್ದಾರೆ.
Advertisement