ಬೆಂಗಳೂರು; ರಾಜ್ಯದಲ್ಲಿರುವ ರೆಡ್ ಝೋನ್ ಹಾಗೂ ಆರೆಂಜ್ ಝೋನ್ ಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಗಳು ಏರುತ್ತಲೇ ಇರುವ ಹಿನ್ನೆಲೆಯಲ್ಲಿ, ಇದೀಗ ಗ್ರೀನ್ ಝೋನ್ ನಲ್ಲಿರುವ ಜನರನ್ನೂ ಕೂಡ ವೈದ್ಯಕೀಯ ಪರೀಕ್ಷೆಗೊಳಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಗ್ರೀನ್ ಝೋನ್ ಗಳಲ್ಲಿ ಈ ವರೆಗೂ ಯಾವುದೇ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಅಲ್ಲದೆ, ಯಾರೊಬ್ಬರೂ ಕೂಡ ಕ್ವಾರಂಟೈನ್ ನಲ್ಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಲಕ್ಷಣಗಳೇ ಕಾಣಿಸಿದ ಜನರಲ್ಲೂ ವೈರಸ್ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳನ್ನು ಮತ್ತಷ್ಟು ಸುರಕ್ಷಿತವಾಗಿರಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ.
ಕೋಲಾರದಿಂದಲೇ ಈಗಾಗಲೇ ಕಾರ್ಯಾಚರಣೆ ಆರಂಭವಾಗಿದ್ದು, ದಿನಕ್ಕೆ 100-200 ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ಪ್ರತೀನಿತ್ಯ 2,000 ಜನರನ್ನು ಪರೀಕ್ಷೆ ನಡೆಸಲಾಗುತ್ತಿದ್ದು, ಇನ್ನೂ 15,000 ಟೆಸ್ಟ್ ಕಿಟ್ ಗಳಿವೆ ಎನ್ನಲಾಗುತ್ತಿದೆ. ಸರ್ಕಾರ ಇದೀಗ ಜಪಾನ್ ಮಾದರಿಯನ್ನು ಅನುಸರಿಸಲು ನಿರ್ಧರಿಸಿದೆ. ಲಕ್ಷಣ ರಹಿತ ವ್ಯಕ್ತಿಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗು ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Advertisement