ಬೆಂಗಳೂರು: ದೇಶಾದ್ಯಂತ ಕೊರೋನಾ ವಿರುದ್ಧ ಹೋರಾಟ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅನುಸರಿಸಿರುವ ಕ್ರಮಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 474 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 18 ಮಂದಿ ಸಾವನ್ನಪ್ಪಿದ್ದು 152 ಜನ ಡಿಸ್ಚಾರ್ಜ್ ಆಗಿದ್ದಾರೆ .
ಕೊರೊನಾ ವೈರಸ್ ಕುರಿತು ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾಗಿಯಾಗಿದ್ದರು. ಈ ವೇಳೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಡಾ.ಕೆ.ಸುಧಾಕರ್, ''ನಮ್ಮ ರಾಜ್ಯದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಬೇರೆ ರಾಜ್ಯಗಳೂ ಕರ್ನಾಟಕ ಮಾದರಿ ಅನುಸರಿಸಲು ಕರೆ ಕೊಟ್ಟರು. ನಮಗೂ ಬೇರೆ ರಾಜ್ಯಗಳಿಗೆ ಸಲಹೆ ಕೊಡಲು ತಿಳಿಸಿದರು'' ಎಂದರು.
ಕೊರೊನಾ ಬೇಗ ಹೋಗಲ್ಲ. ಸೀಲ್ ಡೌನ್ ಮಾಡಿದ ಕೂಡಲೇ ಕೊರೊನಾ ಹೋಗಲ್ಲ. ಕೊರೊನಾ ನಮ್ಮ ಜೊತೆಗೆ ಇರುತ್ತೆ. ಅದರಿಂದ ಹೇಗೆ ರಕ್ಷಣೆ ತಗೋಬೇಕು, ಅಂತರ ಕಾಯ್ದುಕೊಳ್ಳಬೇಕು ಅನ್ನೋದನ್ನು ನಾವು ತಿಳ್ಕೋಬೇಕು. ರಾಜ್ಯದಲ್ಲಿ ಎರಡೂವರೆ ತಿಂಗಳಾದ್ರೂ 445 ಪ್ರಕರಣಗಳಷ್ಟೇ ವರದಿಯಾಗಿದೆ. ಈ ಪೈಕಿ 200 ಕ್ಕೂ ಹೆಚ್ಚು ಜನರಿಗೆ ವಾಸಿಯಾಗಿದೆ'' ಎಂದು ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.
Advertisement