ಕರ್ನಾಟಕದಲ್ಲಿ ಕೊರೋನಾ ಸೋಂಕಿತರಲ್ಲಿ ಯುವ ಜನತೆಯೇ ಹೆಚ್ಚು!

ರಾಜ್ಯಾದ್ಯಂತ ಅಲ್ಲಲ್ಲಿ ಜನರು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡುತ್ತಿರುವುದು, ಕೊರೋನಾ ವೈರಸ್ ತಡೆಗಟ್ಟುವಲ್ಲಿ ಯುವಜನರ ಅಸಡ್ಡೆ ಮನೋಭಾವದಿಂದ ರಾಜ್ಯದಲ್ಲಿ ಕಂಡುಬಂದಿರುವ 480 ಕೊರೋನಾ ಸೋಂಕಿತ ಪ್ರಕರಣಗಳಲ್ಲಿ 292 ಮಂದಿ 40 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ಅಲ್ಲಲ್ಲಿ ಜನರು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡುತ್ತಿರುವುದು, ಕೊರೋನಾ ವೈರಸ್ ತಡೆಗಟ್ಟುವಲ್ಲಿ ಯುವಜನರ ಅಸಡ್ಡೆ ಮನೋಭಾವದಿಂದ ರಾಜ್ಯದಲ್ಲಿ ಕಂಡುಬಂದಿರುವ 480 ಕೊರೋನಾ ಸೋಂಕಿತ ಪ್ರಕರಣಗಳಲ್ಲಿ 292 ಮಂದಿ 40 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.

60 ವರ್ಷಕ್ಕಿಂತ ಮೇಲ್ಪಟ್ಟವರು ಕೊರೋನಾ ವಿರುದ್ಧ ಎಚ್ಚರಿಕೆಯಿಂದಿರಿ ಎಂದು ತಜ್ಞರು ಹೇಳುತ್ತಿರುವ ವರದಿಗೆ ಇದು ವ್ಯತಿರಿಕ್ತವಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟ 8 ಮಂದಿಯಲ್ಲಿ ಕೇವಲ ಇಬ್ಬರು ಮಾತ್ರ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.

ಕರ್ನಾಟಕ ಕೋವಿಡ್ ವಾರ್ ರೂಂನಿಂದ ಪಡೆದಿರುವ ಅಂಕಿಅಂಶ ಪ್ರಕಾರ ಕರ್ನಾಟಕದಲ್ಲಿ 68 ಕೊರೋನಾ ಸೋಂಕಿತ ಪ್ರಕರಣಗಳು 60 ಮತ್ತು ಅದಕ್ಕಿಂತ ಮೇಲಿನ ವಯೋಮಾನದವರಾಗಿದ್ದು 234 ಮಂದಿ 20ರಿಂದ 40 ವರ್ಷದ ಒಳಗಿನರಾಗಿದ್ದಾರೆ. ಅವರಲ್ಲಿ 118 ಮಂದಿ 30ರಿಂದ 40 ವರ್ಷದೊಳಗಿನವರು. 116 ಮಂದಿ 20ರಿಂದ 30 ವರ್ಷದೊಳಗಿನವರು. ನಿನ್ನೆಯವರೆಗೆ ಲೆಕ್ಕ ಸಿಕ್ಕಿದ 474 ಮಂದಿ ರೋಗಿಗಳಲ್ಲಿ 406 ಮಂದಿ 40 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಸೋಂಕಿತರನ್ನು ನೋಡಿದರೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಕಳೆದ ತಿಂಗಳು ಹೇಳಿರುವುದು ನಿಜವಾಗುತ್ತಿದೆ ಎಂದು ಜಯದೇವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ ಸಿ ಎನ್ ಅಶ್ವಥನಾರಾಯಣ ಹೇಳುತ್ತಾರೆ.

ಯುವಜನತೆ ಅಸಡ್ಡೆ ತೋರಿಸದೆ ಲಾಕ್ ಡೌನ್ ವಿನಾಯ್ತಿ ನಂತರ ಉದ್ಯೋಗಕ್ಕೆ, ಹೊರಗಡೆ ಕೆಲಸಕ್ಕೆ ಹೋಗುವ ಯುವಜನತೆ ಮತ್ತು ನಡುವಯಸ್ಸಿನವರು ಹೆಚ್ಚು ಜಾಗರೂಕರಾಗಿರಬೇಕು ಎನ್ನುತ್ತಾರೆ.

ಕೇವಲ ವಯಸ್ಸು ಮಾತ್ರ ಕೊರೋನಾಗೆ ಮಾನದಂಡವಲ್ಲ: ಲಾಕ್ ಡೌನ್ ಮುಗಿದ ನಂತರ ನಾವು ಕೊರೋನಾ ಮುಕ್ತರಾಗುತ್ತೇವೆ, ನಾವು ಸ್ವತಂತ್ರರು ಎಂದು ಭಾವಿಸಿದರೆ ತಪ್ಪು. ಇದು ಎಲ್ಲಾ ವಯೋಮಾನದವರಿಗೆ ಅತ್ಯಂತ ಪ್ರಮುಖ ಘಟ್ಟ. ಜನರು ಆರೋಗ್ಯ ವಿಷಯದಲ್ಲಿ ಈ ಸಂದರ್ಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎನ್ನುತ್ತಾರೆ ಡಾ ಸಿ ಎನ್ ಮಂಜುನಾಥ್.

ನಾರಾಯಣ ಹೃದಯಾಲಯದ ಡಾ ಭುಜಂಗ ಶೆಟ್ಟಿ, ಇನ್ನು ಮೂರು ತಿಂಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಲಾಕ್ ಡೌನ್ ಒಂದು ಪರಿಹಾರವಷ್ಟೆ. ಲಾಕ್ ಡೌನ್ ಸಡಿಲಿಕೆ ನಂತರವೂ ನಮ್ಮ ಎಚ್ಚರಿಕೆಯನ್ನು ನಾವು ಮುಂದುವರಿಸಬೇಕು ಎನ್ನುತ್ತಾರೆ.

ನಮ್ಮದು ಯುವವಯಸ್ಸು, ದೇಹದಲ್ಲಿ ಶಕ್ತಿ ಇದೆ, ಕೊರೋನಾ ಬರುವುದಿಲ್ಲ ಎಂದು ಅಂದುಕೊಳ್ಳುವುದು ತಪ್ಪು. ಯುವಜನತೆಯಲ್ಲಿ ನಿರೋಧ ಮಟ್ಟ ಹೆಚ್ಚಾಗಿರುತ್ತದೆ. ಹಾಗೆಂದು ಅವರು ಅತಿಯಾದ ಆತ್ಮವಿಶ್ವಾಸದಿಂದ ಇರಲು ಸಾಧ್ಯವಿಲ್ಲ. ಹೊರಗೆ ಓಡಾಡುವಾಗ, ಬೇರೊಬ್ಬರ ಜೊತೆ ಸಂಪರ್ಕ, ಬೆರೆಯುವ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಮಣಿಪಾಲ ಆಸ್ಪತ್ರೆಯ ಅಧ್ಯಕ್ಷ ಡಾ ಹೆಚ್ ಸುದರ್ಶನ್ ಬಲ್ಲಾಳ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com