ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖ, ರಾಜಕಾರಣಿಗಳು ಬೀದಿಗಿಳಿದು ಜಗಳ ಮಾಡಬಾರದು: ಆರೋಗ್ಯ ಸಚಿವ ಶ್ರೀರಾಮುಲು

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದು, ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು

ಬಳ್ಳಾರಿ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದು, ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ಬೆಂಗಳೂರಿನಲ್ಲಿ ಶನಿವಾರದಿಂಧ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭವಾಗಿದ್ದು, ಸೋಮವಾರದಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಚಾಲನೆ ದೊರೆಯಲಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ  ಅವರ ಗಮನಕ್ಕೆ ತರಲಾಗುವುದು. ಕೇಂದ್ರದ ಮಾರ್ಗಸೂಚಿಯಂತೆ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

'ಬಳ್ಳಾರಿ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೋವಿಡ್‌–19ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ಲಾಸ್ಮಾ ಥೆರಪಿ ಸೋಮವಾರದಿಂದ (ಏಪ್ರಿಲ್ 27) ಅಧಿಕೃತವಾಗಿ ಆರಂಭವಾಗಲಿದ್ದು, ಮತ್ತಷ್ಟು ಸೋಂಕಿತರು ಬೇಗ ಗುಣಮುಖರಾಗುವರು. ಇನ್ನು ಡೆಂಗಿ, ಜ್ವರ,  ಹೃದಯ ಸಮಸ್ಯೆ ಇರುವವರಿಗೆ ಪಾಸ್‌ ವ್ಯವಸ್ಥೆ ಮಾಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು’ ಎಂದು ಹೇಳಿದರು. 

ಪತ್ರಕರ್ತರ ರಕ್ಷಣೆ ಸರ್ಕಾರದ ಹೊಣೆ
ಅಂತೆಯೇ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಪತ್ರಕರ್ತರ ರಕ್ಷಣೆ ನಮ್ಮ ಸರ್ಕಾರದ ಹೊಣೆ. ಅವರಿಗೆ ಸರ್ಕಾರದಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ನಂಜನಗೂಡಿನ ಜ್ಯುಬಿಲಿಯೆಂಟ್‌ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ  ಸೋಂಕು ಹೇಗೆ ತಗುಲಿತು ಎನ್ನುವುದು ಇದುವರೆಗೆ ಗೊತ್ತಾಗಿಲ್ಲ ಎಂದು ತಿಳಿಸಿದರು.

ಬೀದಿಗಿಳಿದು ಜಗಳ ಮಾಡಬಾರದು
ಇದೇ ವೇಳೆ ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ ಹಿರಿಯ, ಅನುಭವಿ ರಾಜಕಾರಣಿ. ಅವರು ಬೀದಿಗಿಳಿದು ಜಗಳ ಮಾಡಬಾರದು. ಮಂಡ್ಯದಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು. 'ಶ್ರೀಕಂಠೇಗೌಡರಂತಹ ರಾಜಕಾರಣಿಗಳು ಬೇರೆಯವರಿಗೆ  ಮಾದರಿಯಾಗಬೇಕು. ಅದು ಬಿಟ್ಟು ಬೀದಿಗಿಳಿದು ಜಗಳ ಸಲ್ಲ. ಪಾದರಾಯನಪುರ ಸೇರಿದಂತೆ ಅನೇಕ ಕಡೆ ಈ ರೀತಿಯ ಘಟನೆಗಳು ನಡೆದಿದ್ದು, ಅವುಗಳು ಮರುಕಳಿಸಬಾರದು. ಜನಪ್ರತಿನಿಧಿಗಳು ಬೇರೆಯವರಿಗೆ ಮಾದರಿಯಾಗಬೇಕು. ಇನ್ಮುಂದೆ ಇಂತಹ ಘಟನೆಗಳು ಆಗಬಾರದು  ಎಂದು ಎಲ್ಲರಲ್ಲೂ ಮನವಿ ಮಾಡುತ್ತೇನೆ. ಪಾದರಾಯನಪುರ ಸೇರಿ ಅನೇಕ ಕಡೆ ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ನಡೆದಿವೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com