ಬೆಂಗಳೂರು: ರಾಮನಗರವನ್ನು ಕೋವಿಡ್ ಹಸಿರು ವಲಯ ಎಂದು ಘೋಷಿಸಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರಾಮನಗರ ಜಿಲ್ಲೆಯನ್ನು ಕೊರೊನಾ ವೈರಸ್ ಹಸಿರು ಜಿಲ್ಲೆಯನ್ನಾಗಿ ಮಾರ್ಪಡಿಸಿ ಘೊಷಣೆ ಮಾಡಬೇಕೆಂದು ಮಾಜಿ ಮಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ರಾಜಧಾನಿಯ ಕೈದಿಗಳಿಂದ ಕರೋನಾ ಸೋಂಕು ಭೀತಿಗೊಳಗಾಗಿತ್ತು. ಇದೀಗ ನಗರಸಭೆ, ಜೈಲು ಸಿಬ್ಬಂದಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ 68 ಮಂದಿಯ ವೈದ್ಯಕೀಯ ಪರೀಕ್ಷೆ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತಂದಿದೆ.
ಇನ್ನೂ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ರಾಮನಗರ ಜಿಲ್ಲೆಯನ್ನುಕರೋನಾ ಮುಕ್ತ ಜಿಲ್ಲೆಯನ್ನಾಗಿ ಕಾಯ್ದುಕೊಳ್ಳಲು ಎಲ್ಲರೂ ಸಂಕಲ್ಪ ಮಾಡೋಣ. ಸರ್ಕಾರವು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಿ. ನೆಗೆಟಿವ್ ವರದಿ ಬಂದಿದೆ ಎಂದು ಮೈಮರೆಯುವ ಸಮಯ ಇದಲ್ಲ. ತಾಂತ್ರಿಕ ಕಾರಣಗಳಿಂದ ಕೆಂಪು ವಲಯವಾಗಿ ಪರಿವರ್ತಿತವಾಗಿದ್ದ ರಾಮನಗರ ಜಿಲ್ಲೆಯನ್ನು ಹಸಿರು ವಲಯವನ್ನಾಗಿ ಮಾರ್ಪಡಿಸಿ, ಹಸಿರು ವಲಯದ ಜಿಲ್ಲೆಗಳಿಗೆ ನೀಡಿರುವ ವಿನಾಯಿತಿಯನ್ನು ಘೋಷಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
Advertisement