ಬೆಂಗಳೂರು: ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಬಗ್ಗೆ ಸರ್ಕಾರ ಎಷ್ಟೇ ಮಾಹಿತಿಗಳನ್ನೂ ನೀಡುತ್ತಿದ್ದರೂ, ಜನರಲ್ಲಿ ಹಾಗೂ ರೋಗಿಗಳಲ್ಲಿ ಮಾತ್ರ ಆತಂಕ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಆತಂಕಕ್ಕೊಳಗಾಗಿರುವ ರೋಗಿಗಳ ನೆರವಿಗೆ ಇದೀಗ ನಿಮ್ಹಾನ್ಸ್ ಬಂದಿದೆ.
ನಿಮ್ಹಾನ್ಸ್'ನ ಕ್ಲಿನಿಕಲ್ ಸೈಕಾಲಜಿ, ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ಮತ್ತು ಮೆಂಟರ್ ಹೆಲ್ತ್ ಎಡುಕೇಷನ್ ಇಲಾಖೆ ಆನ್ ಲೈನ್ ಸೆಷನ್ಸ್ ನಡೆಸಿದ್ದು, ಈ ವೇಳೆ 1000 ಜನರು ತಮ್ಮ ಹೆಸರುಗಳನ್ನು ದಾಖಲಿಸಿದ್ದಾರೆ. ಆದರೆ, ಸಮಯದ ಅಭಾವದಿಂದಾಗಿ ಕೇವಲ 300 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕೊರೋನಾ ಕುರಿತು ಜನರದಲ್ಲಿ ಸಾಕಷ್ಟು ಆತಂಕ ಹಾಗೂ ತಪ್ಪು ತಿಳುವಳಿಕೆಗಳಿವೆ. ತಡವಾಗಿ ಸಿಗುವ ಸಹಾಯದಿಂದಾಗಿ ಜನರು ನೋವನ್ನು ಅನುಭವಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳು ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಕೋಪ, ಭೀತಿ, ಕಿರಿಕಿರಿಗೊಳ್ಳುವಂತಹ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ಇಲಾಖೆಯ ಮುಖ್ಯಸ್ಥೆ ಡಾ.ಕೆ.ಎಸ್.ಮೀನಾ ಅವರು ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಗಳ ಕುಟುಂಬ ಹಾಗೂ ಸ್ನೇಹಿತರು ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಸಲುವಾಗಿ ಇಂತಹ ನಿರ್ಧಾರ ಕೈಗೊಂಡಿದ್ದೇವೆ. ಜನರದಲ್ಲಿ ಪರಿಸ್ಥಿತಿ ನಿಭಾಯಿಸುವ ಕುರಿತು ಹಾಗೂ ಸೋಂಕು ತಗುಲಿದಾಗ ಯಾವ ರೀತಿ ನಡೆದುಕೊಳ್ಳಬೇಕೆಂಬ ತಿಳುವಳಿಕೆಯನ್ನು ನೀಡಲಾಗುತ್ತಿದೆ. ಒಂಟಿತನ, ಆರ್ಥಿಕ ಸಂಕಷ್ಟ, ಔಷಧಿಗಳನ್ನು ಕೊಳ್ಳಲು ಸಾಧ್ಯವಾಗದೇ ಇರುವುದು, ಮಕ್ಕಳ ಸಮಸ್ಯೆ, ವರ್ಕಿಂಗ್ ಪೇರೆಂಟ್ಸ್ ನಲ್ಲಿ ವೈರಸ್ ಬರುವ ಭೀತಿ, ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗದೆ ಬೇಸರಗೊಳ್ಳುವುದು ಹಾಗೂ ಹೊರಗೆ ಆಟವಾಡಲು ಸಾಧ್ಯವಾಗದೆ ಮಕ್ಕಳು ಬೇಸರಗೊಳ್ಳುತ್ತಿದ್ದಾರೆ. ಲಾಕ್ ಡೌನ್ ವೇಳೆ ಈ ಎಲ್ಲಾ ಸಮಸ್ಯೆಗಳು ಎದುರಾಗುತ್ತಿವೆ.
ಸೋಂಕಿತ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ನೀಡುವ ಹಾಗೂ ಆತನಿಗೆ ಸಹಾಯ ಮಾಡುವ ವರ್ತನೆಗಳು ಬೆಳೆಯಬೇಕು. ಜನರು ಒಬ್ಬರನ್ನೊಬ್ಬರು ಮಾತನಾಡಲು ಸಾಧ್ಯವಾಗದೇ ಹೋದರೆ, ವರ್ಚುವಲ್ ಟಾಕಿಂಗ್ ಬಳಕೆ ಮಾಡಬೇಕು. ಉತ್ತಮ ಸಂಬಂಧ ವೃದ್ಧಿಸಿಕೊಳ್ಳಬೇಕು. ಮನೆಯಲ್ಲಿರುವ ಸಂದರ್ಭದಲ್ಲಿ ಯೋಗ, ಧ್ಯಾನ ಮಾಡಬೇಕು. ಇವುಗಳು ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತವೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತಷ್ಟು ಸೆಷನ್ಸ್ ಗಳನ್ನು ಆಯೋಜಿಸಲಾಗುತ್ತದೆ ಎಂದು ಮೀನಾ ಅವರು ತಿಳಿಸಿದ್ದಾರೆ.
Advertisement