ಉಡುಪಿ: ಕೋವಿಡ್ -೧೯ ರೋಗಿಗಳ ಚಿಕಿತ್ಸೆ ವೇಳೆ ವೈದ್ಯರು ಧರಿಸುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ವಾಗಿರುವ ರಕ್ಷಾ ಕವಚವೊಂದು ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ಬಳಿಯ ನದಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ನದಿಯಲ್ಲಿ ಎಸೆಯಲಾಗಿರುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಬಗ್ಗೆ ಪಂಚಾಯಿತಿ ಕಚೇರಿಯ ಸಿಬ್ಬಂದಿ ಮಂಗಳವಾರ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು, ನಂತರ ಈ ಸಂಬಂಧ ಪೊಲೀಸರಿಗೂ ದೂರು ಸಲ್ಲಿಸಲಾಗಿದೆ.
ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ವೇಳೆ ವೈದ್ಯರು ಮಾತ್ರ ಬಳಸುವ ರಕ್ಷಾ ಕವಚವಾಗಿದೆ. ಈ ರಕ್ಷಾ ಕವಚ ಯಾವ ಆಸ್ಪತ್ರೆಯ ವೈದ್ಯರು ಬಳಸಿದ್ದು, ಅದನ್ನು ಯಾವ ಉದ್ದೇಶಕ್ಕಾಗಿ ನದಿಗೆ ಎಸೆಯಲಾಗಿದೆ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕಿದೆ.
ಈ ಕುರಿತು ಮಾತನಾಡಿರುವ ಕೊರೊನಾ ವೈರಸ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್, ಪೊಲೀಸ್ ತನಿಖೆಯ ನಂತರ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ವನ್ನು ಜೈವಿಕ ರಸಾಯನಿಕ ನಿರ್ವಹಣಾ ವಿಧಾನದಲ್ಲಿ ನಾಶಗೊಳಿಸಬೇಕಿದೆ ಎಂದು ಹೇಳಿದ್ದಾರೆ.
Advertisement