ತುಮಕೂರು: ತುಮಕೂರಿನಲ್ಲಿ ಕೊರೊನಾಗೆ ಎರಡನೇ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿದ್ದು, ಸ್ಯಾಂಪಲ್ಸ್ ವರದಿ ಬರುವ ಮುನ್ನವೇ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದೆ.
ಇದೀಗ ವರದಿ ಪಾಸಿಟಿವ್ ಬಂದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಏ.25 ರಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ 26 ರಂದು ಮೃತಪಟ್ಟಿದ್ದ.
ಏ.25, 26ರಂದು ಎರಡು ಬಾರಿ ಸ್ಯಾಂಪಲ್ಸ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಏ.26 ರಂದು ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ.
ಶವ ನೀಡುತ್ತಿದ್ದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕುಟುಂಬಸ್ಥರು ತುಮಕೂರು ಗ್ರಾಮಾಂತರದ ಲಾಯ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ದು, ಇದೀಗ ಮೃತ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಜಿಲ್ಲಾಡಳಿತದ ಮಹಾ ಎಡವಟ್ಟಿಗೆ ಜನ ಕಂಗಾಲಾಗಿದ್ದಾರೆ. ಈ ಹಿಂದೆ ತುಮಕೂರಿನಲ್ಲಿ 65 ವರ್ಷದ ವೃದ್ಧ ಕೊರೋನಾ ಸೋಂಕಿಗೆ ಬಲಿಯಾಗಿದ್ದ.
ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು ರೋಗಿ ನಂ.535 ಮೃತ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದ್ದನ್ನು ದೃಢಪಡಿಸಿದ್ದಾರೆ. ಈ ಮೂಲಕ ತುಮಕೂರಿನಲ್ಲಿ ಕೊರೊನಾ ಗೆ ಎರಡನೇ ಬಲಿಯಾದಂತಾಗಿದೆ.
Advertisement