ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಬಾಲಕಿ ಪೋಷಕರ ಆಕ್ರೋಶಕ್ಕೆ ಬಲಿಯಾದ ಆರೋಪಿ, ಮೂವರ ಬಂಧನ

ಅಪ್ರಾಪ್ತಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿಯೋರ್ವ ಪೋಷಕರ ಆಕ್ರೋಶಕ್ಕೆ ಬಲಿಯಾಗಿರುವ ಘಟನೆ ಮಂಡ್ಯ ತಾಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಅಪ್ರಾಪ್ತಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿಯೋರ್ವ ಪೋಷಕರ ಆಕ್ರೋಶಕ್ಕೆ ಬಲಿಯಾಗಿರುವ ಘಟನೆ ಮಂಡ್ಯ ತಾಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಎಸ್.ಐ.ಕೋಡಿಹಳ್ಳಿ ನಿವಾಸಿ ಭೈರ (30) ಪೋಷಕರ ಆಕ್ರೋಶಕ್ಕೆ ಕೊಲೆಯಾದ ವ್ಯಕ್ತಿ.

ಮೂಲತಃ ಎಸ್.ಐ.ಕೋಡಿಹಳ್ಳಿಗ್ರಾಮದ ನಿವಾಸಿಯಾದ ಭೈರ ಅದೇ ಗ್ರಾಮದ 7 ವರ್ಷದ ಬಾಲಕಿಯನ್ನು ಜು.29ರಂದು ಮಧ್ಯಾಹ್ನ ಚಾಕೊಲೇಟ್ ಕೊಡಿಸುವ ನೆಪದಲ್ಲಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌಜನ್ಯ ನಡೆಸಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನ ಪೋಷಕರು ವಿಚಾರಿಸದಾಗ ವಿಷಯ ಬಯಲಾಗಿತ್ತು, ಇದರಿಂದ ಆಕ್ರೋಶಗೊಂಡ ಬಾಲಕಿಯರ ಪೋಷಕರು ಅದೇ ದಿನ ಸಂಜೆ ವೇಳೆಗೆ ಆತನನ್ನು ಹಿಡಿದು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು.

ಬಾಲಕಿಯ ಪೋಷಕರ ಥಳಿತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಭೈರನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಗುರುವಾರವೇ ಮೃತನ ಅಂತ್ಯಕ್ರಿಯೆಯೂ ನೆರವೇರಿದೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಯಾಗಿರುವ ಆರೋಪಿ ಭೈರ ಚಿಕ್ಕ ಮಕ್ಕಳಿಗೆ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ತೋರಿಸುತ್ತಿದ್ದನು ಎಂಬ ಮಾಹಿತಿಯೂ ಇದೆ. ಶಾಲೆಗೆ ಹೋಗಲಾಗದೆ ಮಕ್ಕಳು ಮನೆಯಲ್ಲೇ ಇರುವುದನ್ನು ದುರುಪಯೋಗ ಪಡಿಸಿಕೊಂಡು ಆರೋಪಿ ಈ ರೀತಿಯ ಕೃತ್ಯಗಳನ್ನು ಎಸಗುತ್ತಿದ್ದನು ಎನ್ನಲಾಗಿದೆ.

ಬಾಲಕಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಪೋಷಕರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೆರೆಗೋಡು ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಮತ್ತೊಂದು ದೂರು ದಾಖಲಾಗಿದೆ. ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಭೈರನ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೆರೆಗೋಡು ಪೊಲೀಸರು ಬಾಲಕಿ ಕಡೆಯ ಮೂವರು ಸಂಬಂಧಿಕರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com