ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಚೇತರಿಕೆ ದರ ಶೇ.7.81ರಷ್ಟು ಹೆಚ್ಚಾಗಿ ಶೇ.42.81ಕ್ಕೆ ತಲುಪಿದೆ. ರಾಜ್ಯದಲ್ಲಿ ಕಳೆದ 11 ದಿನಗಳ ನಂತರ ಸೋಮವಾರವಷ್ಟೇ ಸೋಂಕಿತರ ಸಂಖ್ಯೆ 5000 ಗಡಿಯೊಳಗೆ ಬಂದಿದೆ. ಸೋಮವಾರ 4752 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, 4776 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆಗಸ್ಟ್ 2ರವರೆಗೆ ಸತತ 11 ದಿನ 5 ಸಾವಿರಕ್ಕೂ ಹೆಚ್ಚು ಪ್ರಕಱಣ ದಾಖಲಾಗಿದ್ದ ರಾಜ್ಯದಲ್ಲಿ 12ನೇ ದಿನ 5 ಸಾವಿರಕ್ಕಿಂತ ಕಡಿಮೆಯಾಗಿದೆ.ಸೋಮವಾರ ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1,39,571ಕ್ಕೆ ಏರಿಕೆಯಾಗಿದೆ. ಇನ್ನು ಸೋಮವಾರ 98 ಮಂದಿ ಮೃತಪಟ್ಟಿದ್ದು, ಒಟ್ಟು ಸಾವು ಎರಡೂವರೆ ಸಾವಿರದ ಗಡಿ ದಾಟಿ 2,594ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರಲ್ಲಿ 62,500 ಮಂದಿ ಚೇತರಿಸಿಕೊಂಡಿದ್ದು, 74,469 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 629 ಮಂದಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ರಾಜ್ಯದಲ್ಲಿ ಸೋಂಕಿಗಿಂತ ಹೆಚ್ಚು ಮಂದಿ ಗುಣಮುಖ ಹೊಂದಿದ್ದು ಬೆಂಗಳೂರಿನಲ್ಲಿ 1,467 ಮಂದಿಗೆ ಸೋಂಕು ದೃಢಪಟ್ಟಿದ್ದರೆ, 2,693 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ಕಲುಬುರಗಿ 369, ರಾಯಚೂರು 141, ದಕ್ಷಿಣ ಕನ್ನಡ 124, ಉಡುಪಿ 122, ಬೆಂಗಳೂರು ಗ್ರಾಮಾಂತರ 116, ಚಿಕ್ಕಬಳ್ಳಾಪುರ 90, ಬೀದರ್ 90, ಧಾರವಾಡ 88. ದಾವಣಗೆರೆ 82, ಉತ್ತರ ಕನ್ನಡ 64, ಬಾಗಲಕೋಟೆ 64, ಚಿಕ್ಕಬಳ್ಳಾಪುರ 53, ಹಾವೇರಿ 53, ಮಂಡ್ಯ 44, ಗದಗ 40, ಕೊಡಗು 32, ಚಾಮರಾಜನಗರ 31. ಬೆಳಗಾವಿ 29, ತುಮಕೂರು 20, ಕೊಪ್ಪಳ 18, ಬಳ್ಳಾರಿ 18, ಯಾದಗಿರಿ 12, ವಿಜಯಪುರದಲ್ಲಿ 9 ಮಂದಿ ಗುಣಮುಖರಾಗಿದ್ದಾರೆ.
Advertisement