ಬೆಂಗಳೂರಿನಲ್ಲಿ ಇಮ್ಯುನಾಲಜಿ, ಲಸಿಕಾ ಸಂಶೋಧನಾ ಕೇಂದ್ರ ಸ್ಥಾಪನೆಗೆ ಚಿಂತನೆ: ಡಾ. ಅಶ್ವತ್ಥ್ ನಾರಾಯಣ್

ಭವಿಷ್ಯದ ದಿನಗಳಲ್ಲಿ ಇಮ್ಯುನಾಲಜಿ ಅಧ್ಯಯನವು ಅತ್ಯಂತ ಪ್ರಮುಖವಾಗಲಿದ್ದು, ಇದನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯದಲ್ಲಿ ಅಮೆರಿಕದ ಅಟ್ಲಾಂಟಾದ ಎಮೊರಿ ಲಸಿಕಾ ಕೇಂದ್ರದ ಸಹಯೋಗದೊಂದಿಗೆ ಇಮ್ಯುನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ.
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ

ಬೆಂಗಳೂರು: ಭವಿಷ್ಯದ ದಿನಗಳಲ್ಲಿ ಇಮ್ಯುನಾಲಜಿ ಅಧ್ಯಯನವು ಅತ್ಯಂತ ಪ್ರಮುಖವಾಗಲಿದ್ದು, ಇದನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯದಲ್ಲಿ ಅಮೆರಿಕದ ಅಟ್ಲಾಂಟಾದ ಎಮೊರಿ ಲಸಿಕಾ ಕೇಂದ್ರದ ಸಹಯೋಗದೊಂದಿಗೆ ಇಮ್ಯುನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ಐಟಿ- ಬಿಟಿ ಸಚಿವರೂ
ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಲಸಿಕಾ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಅಟ್ಲಾಂಟಾದ ಎಮೊರಿ ವಿಶ್ವವಿದ್ಯಾಲಯದ ಲಸಿಕಾ ಕೇಂದ್ರದ ನಿರ್ದೇಶಕ ಡಾ.ರಫಿ ಅಹಮ್ಮದ್ ಅವರೊಂದಿಗೆ ವೆಬಿನಾರ್ ಮೂಲಕ ಸೋಮವಾರ ನಡೆಸಿದ ವಿಚಾರ ವಿನಿಮಯ ಸಭೆಯಲ್ಲಿ  ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿದರು.

ಲಸಿಕೆಗಳು, ಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್ ಸಂಶೋಧನೆ ಇವೆಲ್ಲವೂ ಅಂತಿಮವಾಗಿ ‘ಇಮ್ಯುನಾಲಜಿ’ ವ್ಯಾಪ್ತಿಗೇ ಬರುತ್ತವೆ. ‘ಇಮ್ಯುನಾಲಜಿ’ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳು ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳಿಗೆ ಉತ್ತರ ಒದಗಿಸಬಲ್ಲವು. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಈಗ ಈ ಕ್ಷೇತ್ರದ ಮೇಲಿನ ಹೂಡಿಕೆಯು ಫಲಪ್ರದ ಫಲಿತಾಂಶಗಳನ್ನು ನೀಡಲಿದೆ ಎಂದು ಅವರು ವಿವರಿಸಿದರು.

ಈಗ ಇಡೀ ಜಗತ್ತೇ ‘ಇಮ್ಯುನಾಲಜಿ’ ಬಗ್ಗೆ ಆಲೋಚಿಸುತ್ತಿರುವ ಹಾಗೂ ಪರಿಣಾಮಕಾರಿ ‘ಲಸಿಕೆ’ ಗೆ ಎದುರು ನೋಡುತ್ತಿರುವ ಸಂದರ್ಭ ಇದಾಗಿದೆ. ಇಂತಹ ಸಮಯದಲ್ಲಿ ‘ಇಮ್ಯೂನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರ’ದ ಸ್ಥಾಪನೆ ಅತ್ಯಂತ ಸಂದರ್ಭೋಚಿತ ಎಂದು  ಅಭಿಪ್ರಾಯಪಟ್ಟರು.

ಇದೇ ವೇಳೆ ಅವರು, ಕೋವಿಡ್-19 ರೋಗ ದೃಢೀಕರಣದ ಆಧುನಿಕ ವಿಧಾನಗಳ ಅಭಿವೃದ್ಧಿ ಬಗ್ಗೆಯೂ ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ. ಇದು ಈಗಿನ ಸನ್ನಿವೇಶದಲ್ಲಿ ಸೂಕ್ಷ್ಮ ಸಂಗತಿಯೂ ಆಗಿದ್ದು, ಈ ದಿಸೆಯಲ್ಲಿ ಕೂಡ ಸಹಭಾಗಿತ್ವದಿಂದ ಹೆಚ್ಚಿನ ಪ್ರಯೋಜನವನ್ನು ನಿರೀಕ್ಷಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಏನಿಲ್ಲವೆಂದರೂ ಸುಮಾರು 20 ಉತ್ಕೃಷ್ಠ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವೆಲ್ಲವನ್ನೂ ಒಂದೆಡೆ ಕೇಂದ್ರೀಕರಿಸಿ ಲಸಿಕಾ ಸಂಬಂಧಿ ಚಟುವಟಿಕೆಗಳಿಗೆ ಒತ್ತು ನೀಡಬೇಕಾಗಿದೆ. ಇದಕ್ಕೆ ಪೂರಕವಾದ ನೀತಿಯನ್ನು ಸರ್ಕಾರ ರೂಪಿಸಲಿದೆ, ಕ್ಲಿನಿಕಲ್ ಟ್ರಯಲ್ ಗೆ ಸಂಬಂಧಿಸಿದಂತೆ ದೇಶದಲ್ಲಿ ಮುಂಚೆ ಹಲವಾರು ಕಟ್ಟುಪಾಡುಗಳಿದ್ದವು. ಆದರೆ ಅನಗತ್ಯ ಕಟ್ಟುಪಾಡುಗಳನ್ನು ಈಗ ಸಡಿಲಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಅವರು ತಿಳಿಸಿದರು.

ಡಾ.ರಫಿ ಅವರು ಮಾತನಾಡಿ, ಎಮೊರಿ ಲಸಿಕಾ ಕೇಂದ್ರವು ಸದ್ಯ ಅತ್ಯಂತ ನಿಖರತೆಯಿಂದ ಕೂಡಿದ ಅತ್ಯಾಧುನಿಕ ಕ್ಷಿಪ್ರ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಅಟ್ಲಾಂಟಾದ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. ಪ್ಲಾಸ್ಮಾ ಥೆರಪಿ, ಹ್ಯೂಮನ್ ಮಾಲಿಕ್ಯುಲಾರ್ ಆಂಟಿಬಾಡೀಸ್ ಇವು ಎಮೊರಿ ಕೇಂದ್ರವು ಸಂಶೋಧನಾ ಕಾರ್ಯನಿರತವಾಗಿರುವ ಇನ್ನಿತರ ಪ್ರಮುಖ ಕ್ಷೇತ್ರಗಳಾಗಿವೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com