ಬೆಂಗಳೂರು: ಸಹಕಾರ ನಗರದಲ್ಲಿರುವ ಬೋರ್ವೆಲ್ ಕೊರೆಯುವ ಘಟಕದ ಕಚೇರಿಯಲ್ಲಿ ಮಾಲೀಕನಿಂದ ಶೋಷಣೆಗೊಳಪಟ್ಟಿದ್ದ 5 ಮಂದಿ ಜೀತ ಕಾರ್ಮಿಕರನ್ನು ಪೊಲೀಸರು ಹಾಗೂ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಡಳಿತ, ಕೊಡಿಗೆಹಳ್ಳಿ ಪೊಲೀಸ್ ಠಾಣೆ ಹಾಗೂ ಕಾರ್ಮಿಕ ಇಲಾಖೆಗಳ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಡಿಯಲ್ಲಿ ಮಧ್ಯಪ್ರದೇಶದ ಬೇತುಲ್ ಜಿಲ್ಲೆಗೆ ಸೇರಿದ ಐದು ಮಂದಿ ಜೀತಗಾರರನ್ನು ರಕ್ಷಣೆ ಮಾಡಲಾಗಿದೆ.
ಘಟನೆ ಬಳಿಕ ಬೋಲ್ವೆಲ್ ಮಾಲೀಕರ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬೋರ್ವೆಲ್ ಮಾಲೀಕ ಕಾರ್ಮಿಕರಿಗೆ ತಿಂಗಳಿಗೆ ರೂ.10 ಸಾವಿರ ವೇತನ ನೀಡುವ ಭರವಸೆ ನೀಡಿ ಕೆಲಸಕ್ಕೆ ಕರೆಸಿಕೊಂಡಿತ್ತ. ಇದನ್ನು ನಂಬಿಕೊಂಡು ಕೆಲಸಕ್ಕೆ ಸೇರಿಕೊಂಡ ಕಾರ್ಮಿಕರಿಗೆ ವೇತನ ನೀಡಿದೆ ಅಗತ್ಯವಿದ್ದಾಗ ಮಾತ್ರ ರೂ.200ರಿಂದ ರೂ.1000 ನೀಡಿ ಬೆದರಿಕೆ ಹಾಕುತ್ತಾ ತಿಂಗಳ ಪೂರ್ತಿ ಕೆಲಸ ಮಾಡಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.
ದಿನಸಿ ಸಾಮಾಗ್ರಿಗಳ ಕೊರತೆಯಿದ್ದ ಹಿನ್ನೆಲೆಯಲ್ಲಿ ದಿನದಲ್ಲಿ ಎರಡು ಬಾರಿಯಷ್ಟೇ ಊಟ ಮಾಡಲಾಗುತ್ತಿತ್ತು. ಬೆಳಿಗ್ಗೆ 6 ಗಂಟೆಯಿಂದ ಕೆಲಸ ಆರಂಭವಾದರೆ, ಸಂಜೆವರೆಗೂ ಮುಂದವರೆಯುತ್ತಿತ್ತು. ಕೆಲವೊಮ್ಮೆ ರಾತ್ರಿಯಾಗುತ್ತಿತ್ತು. ವೇತನ ಕೇಳಿದರೆ, ನೇರವಾಗಿ ಬ್ಯಾಂಕ್ ಖಾತೆಗೆ ಜಮಾವಣೆ ಮಾಡುವುದಾಗಿ ಮಾಲೀಕ ತಿಳಿಸುತ್ತಿದ್ದ. ಆದರೆ, ಅದು ಆಗುತ್ತಲೇ ಇರಲಿಲ್ಲ. ಅಲ್ಲದೆ, ಮನೆಗೆ ಹೋಗಬೇಕೆಂದು ಸಾಕಷ್ಟು ಬಾರಿ ಹೇಳಿದರೂ, ಮಾಲೀಕ ಇದಕ್ಕೆ ಒಪ್ಪುತ್ತಿರಲಿಲ್ಲ. ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲೂ ಒಪ್ಪಿರಲಿಲ್ಲ. ಬೇರೆ ಕಾರ್ಮಿಕರು ದೊರತರೆ ಮಾತ್ರ ಕಳುಹಿಸುವುದಾಗಿ ತಿಳಿಸುತ್ತಿದ್ದ ಎಂದು ರಕ್ಷಣೆಗೊಂಡಿರುವ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Advertisement