ಬಳ್ಳಾರಿ: ಹೋಮ್ ಐಸಲೇಷನ್ ನಲ್ಲಿದ್ದ ಕೊರೋನಾ ಸೋಂಕಿತ ಹಸಿವಿನಿಂದ ಸಾವನ್ನಪ್ಪಿರುವ ಧಾರುಣ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.
ಬಳ್ಳಾರಿಯ ಟಿ ಬೆಳಗಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲೇ ಪ್ರತ್ಯೇಕವಾಗಿದ್ದ ಕೊರೋನಾ ಸೋಂಕಿತ ವೃದ್ಧ ವ್ಯಕ್ತಿ ಊಟ ಸಿಗದೇ ಸಾವನ್ನಪ್ಪಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಬಳ್ಳಾರಿ ಜಿಲ್ಲಾಡಳಿತ ಆದೇಶ ನೀಡಿದೆ.
ಮೂಲಗಳ ಪ್ರಕಾರ ಬಳ್ಳಾರಿಯ ಟಿ ಬೆಳಗಲ್ಲು ಗ್ರಾಮದ ವೃದ್ಧ ವ್ಯಕ್ತಿಗೆ ಸೋಂಕು ತಗುಲಿರುವ ವಿಚಾರ ತಿಳಿಯುತ್ತಲೇ ಆತನ ಕುಟುಂಬಸ್ಥರು ಆತನನ್ನು ಮನೆಯಲ್ಲೇ ಬಿಟ್ಟು ಪ್ರತ್ಯೇಕವಾಗಿ ಹೊರಟುಹೋಗಿದ್ದರು. ಮನೆಯಲ್ಲೇ ಇದ್ದ ಸೋಂಕಿತ ವೃದ್ಧ ವ್ಯಕ್ತಿ ಕೋವಿಡ್ ಸಹಾಯವಾಣಿಗೆ ನಿರಂತರವಾಗಿ ಕರೆ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಅನ್ನ ನೀರು, ಸೂಕ್ತ ಚಿಕಿತ್ಸೆ ಸಿಗದೇ ವೃದ್ಧ ವ್ಯಕ್ತಿ ಮನೆಯಲ್ಲೇ ನರಳಿ ನರಳೀ ಪ್ರಾಣ ಬಿಟ್ಟಿದ್ದಾನೆ.
ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಸೋಂಕಿತ ವೃದ್ಧ ವ್ಯಕ್ತಿ ಊಟಕ್ಕಾಗಿ ಕಿರುಚಾಡುತ್ತಿದ್ದ, ಕಳೆದ 2 ದಿನಗಳಿಂದ ದಾರಿಹೋಕರನ್ನು ಕೂಗಿ ಅನ್ನ ನೀಡುವಂತೆ ಗೋಗರೆಯುತ್ತಿದ್ದ. ಒಮ್ಮೆ ಮಾತ್ರ ಆತನಿಗೆ ಸ್ಥಳೀಯರು ಊಟ ನೀಡಿದ್ದರು. ಆದರೆ ಬಳಿಕ ಸೋಂಕಿತ ವ್ಯಕ್ತಿ ಹಸಿವಿನಿಂದ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಸ್ಥಳೀಯ ಜಿಲ್ಲಾಡಳಿತಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ವೃದ್ಧ ಸೋಂಕಿತ ವ್ಯಕ್ತಿ ಆಗಸ್ಟ್ 15ರಂದು ಕೊರೋನಾ ಸೋಂಕಿಗೆ ತುತ್ತಾಗಿದ್ದ. ಆದರೆ ಆಸ್ಪತ್ರೆಗೆ ತೆರಳದೇ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದ. ಆದರೆ ಆತನ ಕುಟುಂಬಸ್ಥರು ತಮಗೂ ಸೋಂಕು ಅಂಟುವ ಭೀತಿಯಿಂದ ಆತನಿಂದ ಪ್ರತ್ಯೇಕವಾಗಿ ದೂರದ ಪ್ರದೇಶಕ್ಕೆ ತೆರಳಿದ್ದರು.
ಇದಕ್ಕೂ ಮೊದಲು ಸೋಂಕಿತ ವೃದ್ಧ ಕೊಟ್ಟೂರ ಗ್ರಾಮದಲ್ಲಿನ ಕಾರ್ಯಕ್ರಮಕ್ಕೆ ಭಾಗಿಯಾಗಿ ಮನೆಗೆ ವಾಪಸ್ ಆಗಿದ್ದ. ಅಲ್ಲದೆ ಆತನಿಗೆ ಊಟ ನೀಡಲೂ ಕೂಡ ಭಯಪಟ್ಟು ವೃದ್ಧನನ್ನು ಏಕಾಂಗಿಯಾಗಿಸಿದ್ದರು. ಮನೆಯಿಂದ ಸಾಕಷ್ಟು ಬಾರಿ ವೃದ್ಧ ಕಿರುಚಾಡುತ್ತಿದ್ದ. ಊಟ ನೀಡುವಂತೆ ಕೇಳುತ್ತಿದ್ದ. ಸೋಮವಾರ ಆತನ ಆರೋಗ್ಯ ತೀವ್ರ ಹದಗೆಟ್ಟಿತ್ತು. ಇಂದು ಬೆಳಗ್ಗೆ ಆತ ಸೂಕ್ತ ಚಿಕಿತ್ಸೆ ಮತ್ತು ಆಹಾರ ಸಿಗದೇ ಸಾವನ್ನಪ್ಪಿದ್ದಾನೆ. ಪ್ರಸ್ತುತ ವೃದ್ಧನ ಸಾವಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದ್ದು, ಆಶಾ ಕಾರ್ಯಕರ್ತೆಯನ್ನೂ ತನಿಖೆಗೊಳಪಡಿಸುವಂತೆ ಸೂಚಿಸಲಾಗಿದೆ.
Advertisement