ಟಿಡಿಆರ್ ಅಕ್ರಮ: ಪಾಲಿಕೆ ಎಂಜಿನಿಯರ್, ಮಧ್ಯವರ್ತಿಗಳ ನಿವಾಸಗಳ ಮೇಲೆ ಎಸಿಬಿ ದಾಳಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ವ್ಯಾಪ್ತಿಯಲ್ಲಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಅವ್ಯವಹಾರ ನಡೆದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಯಲಿಗೆಳೆದಿದ್ದು, ಪಾಲಿಕೆ ಸಹಾಯಕ ಎಂಜಿನಿಯರ್ ಸೇರಿದಂತೆ ನಾಲ್ವರ ನಿವಾಸಗಳ ಮೇಲೆ ದಾಳಿ ನಡೆಸಿ  ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ
ಭ್ರಷ್ಟಾಚಾರ ನಿಗ್ರಹ ದಳ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ವ್ಯಾಪ್ತಿಯಲ್ಲಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಅವ್ಯವಹಾರ ನಡೆದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಯಲಿಗೆಳೆದಿದ್ದು, ಪಾಲಿಕೆ ಸಹಾಯಕ ಎಂಜಿನಿಯರ್ ಸೇರಿದಂತೆ ನಾಲ್ವರ ನಿವಾಸಗಳ ಮೇಲೆ ದಾಳಿ ನಡೆಸಿ  ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಕೊತ್ತನೂರು-ಆವಲಹಳ್ಳಿ ಮುಖ್ಯರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಬೇಕಾದ ನಿವೇಶನಗಳ ಮತ್ತು ಕಟ್ಟಡಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಕೃಷಿ ಭೂಮಿಯ ದರಗಳನ್ನು ನಿಗದಿ ಮಾಡಿ ಟಿಡಿಆರ್ ವಿಸ್ತೀರ್ಣವನ್ನು ಕಾನೂನು ಬಾಹಿರವಾಗಿ ವಿತರಣೆ ಮಾಡಿ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಕೋಟ್ಯಂತರ ರು.  ನಷ್ಟವನ್ನುಂಟು ಮಾಡಲಾಗಿದೆ ಎಂಬ ಆರೋಪದ ಮೇಲೆ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ಕೈಗೊಂಡರು. ಬಿಬಿಎಂಪಿ ಸಹಾಯಕ ಎಂಜಿನಿಯರ್ ಎಂ.ಎನ್.ದೇವರಾಜು ಅವರ ಎಚ್‌ಎಸ್‌ಆರ್ ಲೇಔಟ್‌ನ ವಾಸದ ಮನೆ,ಮಧ್ಯವರ್ತಿ ಕೆ.ಪಿ.ನಾಗೇಶ್ ಅವರ ಬಿದರಹಳ್ಳಿ ಹೋಬಳಿಯ ಕಣ್ಣೂರು ಗ್ರಾಮದಲ್ಲಿನ  ವಾಸದ ಮನೆ,ಮಧ್ಯವರ್ತಿ ಬಿ.ನಾಗರಾಜು ಅವರ ದೊಡ್ಡಗುಬ್ಬಿಯ ಯರಪ್ಪನಹಳ್ಳಿ ಗ್ರಾಮದಲ್ಲಿನ ವಾಸದ ಮನೆ,ಟಿಡಿಆರ್ ಅರ್ಜಿದಾರ ಸುಬ್ಬರಾವ್ ಅವರ ಬಿದರಹಳ್ಳಿಯ ರಾಂಪುರದಲ್ಲಿನ ವಾಸದ ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

ಬೆಂಗಳೂರು ಪೂರ್ವ ತಾಲೂಕು ರಾಂಪುರದ ಸರ್ವೆ ನಂಬರ್ 149ರಲ್ಲಿ ಅಕ್ರಮವಾಗಿ ಟಿಡಿಆರ್ ಮಂಜೂರಾಗಿತ್ತು. ಇದರಿಂದ ಸುಮಾರು 28 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಿ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಎಸಿಬಿ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಎಸ್ಪಿ  ಕಲಾಕೃಷ್ಣ ಸ್ವಾಮಿ ನೇತೃತ್ವದ ತಂಡದಿಂದ ನಾಲ್ಕು ಕಡೆ ದಾಳಿ ನಡೆದಿದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಇರುವ ಸಹಾಯಕ ಎಂಜಿನಿಯರ್ ದೇವರಾಜ್ ಅವರ ನಿವಾಸಕ್ಕೆ ಬೆಳಗ್ಗೆ 9 ಗಂಟೆ ಸುಮಾರಿಗೆ 2 ವಾಹನಗಳಲ್ಲಿ ಬಂದ ಅಧಿಕಾರಿಗಳು, ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ಕಳೆದ ವರ್ಷ  ಡಿಸೆಂಬರ್‌ನಲ್ಲಿ ಅಕ್ರಮ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಎಂಜಿನಿಯರ್ ದೇವರಾಜ್ ಅವರ ಬಂಧನ ಕೂಡಾ ಆಗಿತ್ತು.

ಕೆ.ಆರ್. ಪುರಂ ಬಳಿಯ ಕೌದೇನಹಳ್ಳಿ ಸಮೀಪ ಆಕ್ರಮ ಡಿಆರ್‌ಸಿ ನೀಡಿದ ಪ್ರಕರಣ ಸಂಬಂಧ ಕಳೆದ ವರ್ಷ ದೇವರಾಜ್ ಅವರ ಬಂಧನವಾಗಿತ್ತು. ಇದೀಗ ರಾಂಪುರದಲ್ಲಿ ಅಕ್ರಮ ಎಸಗಿರುವ ಆರೋಪದ ಮೇಲೆ ಎಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ಬಿದರಹಳ್ಳಿಯ ಕಣ್ಣೂರು ಗ್ರಾಮದಲ್ಲಿ ಇರುವ ಬ್ರೋಕರ್  ನಾಗೇಶ್ ಅವರ ಐಶಾರಾಮಿ ಮನೆಯಲ್ಲೂ ಎಸಿಬಿ ಪರಿಶೀಲನೆ ಮುಂದುವರೆದಿದೆ. ಏಳಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ಪತ್ತೆಯಾದ ದಾಖಲೆಗಳನ್ನು ಆಧರಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com