ಬೆಂಗಳೂರು: ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ನಿಗದಿತ ದಿನಾಂಕಗಳಂದೇ ನಡೆಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ಹೇಳಿದ್ದಾರೆ.
ಪರೀಕ್ಷೆಗೆ ತೊಂದರೆಯನ್ನುಂಟುಮಾಡಲು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿದ್ದು ಕೋವಿಡ್-19 ಸಮಯದಲ್ಲಿ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಪರೀಕ್ಷೆಯನ್ನು ಸುಗಮವಾಗಿ ನಡೆಸಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದವರಿಗೆ ವಿದ್ಯಾರ್ಥಿಗಳು ಮತ್ತು ವ್ಯವಸ್ಥೆ ಮೇಲೆ ಕಾಳಜಿಯಿಲ್ಲ, ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು ನಾವು ವೈರಸ್ ಮಧ್ಯೆ ಜಾಗರೂಕತೆಯಿಂದ ಬದುಕುವುದನ್ನು ಕಲಿಯಬೇಕು. ಜನರಲ್ಲಿ ಗೊಂದಲ ಹುಟ್ಟಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಹಾಳು ಮಾಡಲು ವಿರೋಧ ಪಕ್ಷಗಳ ನಾಯಕರು ನೋಡುತ್ತಿದ್ದಾರೆ,ಈಗಾಗಲೇ ತಡವಾಗಿದೆ, ಇನ್ನಷ್ಟು ವಿಳಂಬ ಮಾಡಿದರೆ ವಿದ್ಯಾರ್ಥಿಗಳ ಬದುಕು ಹಾಳಾಗುತ್ತದೆ ಎಂದರು.
ಜೆಇಇ ಮುಖ್ಯ ಪರೀಕ್ಷೆ ದೇಶಾದ್ಯಂತ ಸೆಪ್ಟೆಂಬರ್ 1ರಿಂದ 6ರವರೆಗೆ, ನೀಟ್ ಪರೀಕ್ಷೆ ಸೆಪ್ಟೆಂಬರ್ 13ರಂದು ನಡೆಯಲಿದೆ.
Advertisement