ಬೆಂಗಳೂರು:ಸಾಲ ಮಾಡಿ ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ ನಿರ್ಮಲಾ ಸೀತಾರಾಮನ್ ಅವರದ್ದು ಯಾವ ಸೀಮೆಯ ಆರ್ಥಿಕ ನೀತಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಿರ್ಮಲಾ ಸೀತಾರಾಮನ್ ರವರೆ,ನಿಮ್ಮ ಸರ್ಕಾರ ರಾಜ್ಯಕ್ಕೆ ಬರಬೇಕಾಗಿದ್ದ 13,700 ಕೋಟಿ ಬಾಕಿಯನ್ನು ಇನ್ನೂ ಕೊಟ್ಟಿಲ್ಲ. ಬಾಕಿ ಹಣ ಪಾವತಿಸದೆ, ನ್ಯಾಯಯುತವಾಗಿ ಸಿಗಬೇಕಾದ ಪಾಲು ಕೊಡದೆ, ಸಾಲ ಮಾಡಿ ಎನ್ನುವ ನಿಮ್ಮಂತ ಅರ್ಥ ಸಚಿವರು ನಮ್ಮ ದೇಶದ ದೌರ್ಭಾಗ್ಯವಲ್ಲದೆ ಮತ್ತೇನು? ಎಂದು ಗುಡುಗಿದ್ದಾರೆ.
ನಿರ್ಮಲಾ ಸೀತಾರಾಮನ್ ರವರೆ ಇದ್ಯಾವ ಸೀಮೆಯ ಆರ್ಥಿಕ ನೀತಿ. ಜಿ ಎಸ್ ಟಿ ಮೂಲಕ ಸಂಗ್ರಹವಾದ ಹಣದಲ್ಲಿ ಆಯಾ ರಾಜ್ಯಗಳಿಗೆ ಪಾಲು ಕೊಡಬೇಕೆಂದು ಜಿಎಸ್ ಟಿ ಕಾಯಿದೆಯಲ್ಲೇ ಇದೆ.ನಮಗೆ ಬರಬೇಕಾದ ಪಾಲು ಬಿಟ್ಟು ನಾವು ಸಾಲಕ್ಕಾಗಿ ಆರ್ ಬಿ ಐ ಕೈ ಕಾಲು ಹಿಡಿಯಬೇಕೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
Advertisement