ಕುಖ್ಯಾತ ವಾಹನ ಕಳ್ಳರ ಸೆರೆ: 18 ಲಕ್ಷ ರೂ. ಮೌಲ್ಯದ ಆಟೋ ರಿಕ್ಷಾ, ದ್ವಿಚಕ್ರ ವಾಹನ ವಶ

ಕುಖ್ಯಾತ ಮೂವರು ವಾಹನ ಕಳ್ಳರನ್ನು ಬಂಧಿಸಿರುವ ಅಶೋಕ ನಗರ ಪೊಲೀಸರು, 18 ಲಕ್ಷ ರೂ. ಬೆಲೆಯ ಆಟೋ ರಿಕ್ಷಾ, ದ್ವಿ ಚಕ್ರ ವಾಹನ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. 
ಕುಖ್ಯಾತ ವಾಹನ ಕಳ್ಳರ ಸೆರೆ: 18 ಲಕ್ಷ ರೂ. ಮೌಲ್ಯದ ಆಟೋ ರಿಕ್ಷಾ, ದ್ವಿಚಕ್ರ ವಾಹನ ವಶ

ಬೆಂಗಳೂರು: ಕುಖ್ಯಾತ ಮೂವರು ವಾಹನ ಕಳ್ಳರನ್ನು ಬಂಧಿಸಿರುವ ಅಶೋಕ ನಗರ ಪೊಲೀಸರು, 18 ಲಕ್ಷ ರೂ. ಬೆಲೆಯ ಆಟೋ ರಿಕ್ಷಾ, ದ್ವಿ ಚಕ್ರ ವಾಹನ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ವಿನಾಯಕನಗರ ರಾಮೋಹಳ್ಳಿ ಅಂಚೆ, ನಿವಾಸಿ ಶ್ರೀನಿವಾಸರಾಜು (22), ರಾಮೋಹಳ್ಳಿ 1ನೇ ಕ್ರಾಸ್ ನಿವಾಸಿ ಹೇಮಂತ್ (28), ರಾಮೋಹಳ್ಳಿ ದೊಡ್ಡ ಬೀದಿ ನಿವಾಸಿ ಎನ್.ರಾಮ (26) ಬಂಧಿತ ಆರೋಪಿಗಳು.

ಆರೋಪಿಗಳು ನಗರದ ವಿವಿಧ ಕಡೆ ರಾತ್ರಿ ವೇಳೆ ಮನೆಗಳ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಗಳು ಮತ್ತು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು.

ಆರೋಪಿಗಳನ್ನು ವಶಕ್ಕೆ ಪಡದು ವಿಚಾರಣೆ ನಡೆಸಿದಾಗ, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಸಂತ ಎಂಬಾತನೊಂದಿಗೆ ಸೇರಿಕೊಂಡು ಬೆಂಗಳೂರು ನಗರದ ಹಲವೆಡೆ ನಿಲ್ಲಿಸಿದ್ದ 8 ಆಟೋ ರಿಕ್ಷಾಗಳನ್ನು ಮತ್ತು 3 ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಈ ವಾಹನಗಳ ನಂಬರ್ ಪ್ಲೇಟ್ ಗಳನ್ನು ಬದಲಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಮಾರಾಟದಿಂದ ಬಂದ ಹಣದಲ್ಲಿ ಎಲ್ಲರೂ ಮದ್ಯಪಾನ ಮತ್ತು ಜೂಜಾಟದಲ್ಲಿ ತೊಡಗಿ ಮೋಜು ಮಾಡುತ್ತಿದ್ದರು.

ಅಲ್ಲದೆ ಕೆಂಗೇರಿ ಹೋಬಳಿ ರಾಮೋಹಳ್ಳಿ ಚಿಕ್ಕಲ್ಲೂರಿನ ಬಳಿ ಇರುವ ಟಾರ್ ಪ್ಲಾಂಟ್ ಫ್ಯಾಕ್ಟರಿಯ ಬೀಗ ಒಡೆದು ಫ್ಯಾಕ್ಟರಿಯಲ್ಲಿದ್ದ ಒಂದು ಫ್ರಿಡ್ಜ್, ಒಂದು ವಾಟರ್ ಸರ್ವೀಸ್ ಮೋಟರ್, ಒಂದು ಟಿವಿ, ಫ್ಯಾನ್, ಟೂಲ್ಸ್ ಗಳನ್ನು ಕಳವು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳಿಂದ ಸುಮಾರು 18,10,000 ರೂ. ಬೆಲೆಯ ಆಟೋ ರಿಕ್ಷಾಗಳು, ದ್ವಿಚಕ್ರ ವಾಹನಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಅವರ ಮಾರ್ಗದರ್ಶನದಲ್ಲಿ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಎನ್.ಅನುಚೇತ್ ಮತ್ತು ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಯತಿರಾಜ್ ಬಿ.ಆರ್. ಅವರ ನೇತೃತ್ವದಲ್ಲಿ ಅಶೋಕನಗರ ಪೊಲೀಸ್ ಇನ್ಸ್ ಪೆಕ್ಟರ್ ಭರತ್ ಮತ್ತು ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com