ಅಬ್ಬಬ್ಬಾ.. ವಿಧಾನ ಸೌಧ ಎಷ್ಟು ಹೊಳೆಯುತ್ತಿದೆ ನೋಡಿ, ಕೇವಲ ಗೋಡೆ-ಕಾರಿಡಾರ್ ಸ್ವಚ್ಛಗೊಳಿಸಲು 59 ಲಕ್ಷ ರೂ.!

ಸ್ವಚ್ಛ ಪರಿಸರ, ಸ್ವಸ್ಥ ಆರೋಗ್ಯ ಮಾತನ್ನು ರಾಜ್ಯಸರ್ಕಾರ ಶಿರಸಾ ಪಾಲಿಸುವಂತೆ ಕಾಣುತ್ತಿದೆ. ಆದರೆ ಸ್ವಚ್ಛತೆ ಹೆಸರಿನಲ್ಲಿ ಲಕ್ಷ ಲಕ್ಷ ಖರ್ಚು ಮಾಡುತ್ತಿರುವುದಂತೂ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಸರ್ಕಾರದ ಹಣ ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂಬಂತೆ ಇಲ್ಲಿ ಕಾಣುತ್ತಿದೆ.
ವಿಧಾನಸೌಧ ಕಾರಿಡಾರ್ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ
ವಿಧಾನಸೌಧ ಕಾರಿಡಾರ್ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ

ಬೆಂಗಳೂರು: ಸ್ವಚ್ಛ ಪರಿಸರ, ಸ್ವಸ್ಥ ಆರೋಗ್ಯ ಮಾತನ್ನು ರಾಜ್ಯಸರ್ಕಾರ ಶಿರಸಾ ಪಾಲಿಸುವಂತೆ ಕಾಣುತ್ತಿದೆ. ಆದರೆ ಸ್ವಚ್ಛತೆ ಹೆಸರಿನಲ್ಲಿ ಲಕ್ಷ ಲಕ್ಷ ಖರ್ಚು ಮಾಡುತ್ತಿರುವುದಂತೂ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಸರ್ಕಾರದ ಹಣ ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂಬಂತೆ ಇಲ್ಲಿ ಕಾಣುತ್ತಿದೆ.

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಗೋಡೆ ಮತ್ತು ಕಾರಿಡಾರ್ ಸ್ವಚ್ಛಗೊಳಿಸಲು ಸರ್ಕಾರ ಮಾಡುತ್ತಿರುವ ಖರ್ಚು ಕನಿಷ್ಠ 59 ಲಕ್ಷ ರೂಪಾಯಿ. ಅದು ಕೂಡ ಕೇವಲ 7 ತಿಂಗಳಿಗೆ. ಈ ಅವಧಿ ಮುಗಿದ ಬಳಿಕ ಹೊಸ ಟೆಂಡರ್ ಕರೆಯಲಾಗುತ್ತದೆ.

ಈ ಕೊರೋನಾ ಸಮಯದಲ್ಲಿ ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆ ಎದುರಿಸುತ್ತಿರುವಾಗ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿರುವಾಗ, ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ನೀಡಲು ಸಾಧ್ಯವಿಲ್ಲದಿರುವಾಗ ಇಷ್ಟೊಂದು ಖರ್ಚು ಕೇವಲ ಸ್ವಚ್ಛ ಮಾಡುವುದಕ್ಕೆ ಬೇಕಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸುತ್ತದೆ. ವಿಧಾನಸೌಧದ ಲೋಕೋಪಯೋಗಿ ಇಲಾಖೆ ಖಾಸಗಿ ಸಂಸ್ಥೆಗಳಿಂದ 7 ತಿಂಗಳಿಗೆ 59 ಲಕ್ಷ ರೂಪಾಯಿಯಂತೆ ಕಳೆದ ತಿಂಗಳು ಟೆಂಡರ್ ಕರೆದಿದೆ. ಅದರರ್ಥ ಸರ್ಕಾರ ಪ್ರತಿ ತಿಂಗಳು ಕೇವಲ ಕಾರಿಡಾರ್ ಮತ್ತು ಗೋಡೆ ಸ್ವಚ್ಛಗೊಳಿಸಲು ತಿಂಗಳಿಗೆ 8 ಲಕ್ಷ ರೂಪಾಯಿ ಖರ್ಚು ಮಾಡುತ್ತದೆ. ಇನ್ನು ಹೌಸ್ ಕೀಪಿಂಗ್ ಸಿಬ್ಬಂದಿ ಮತ್ತು ಇತರ ಸಾಮಾನ್ಯ ನಿರ್ವಹಣೆಗೆ ಮಾಡುವ ಖರ್ಚು ಬೇರೆ.

ವಿಧಾನಸೌಧವೆಂದರೆ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಕೆಲಸ ಮಾಡುವ ಸ್ಥಳ. ಇಲ್ಲಿ ಒಟ್ಟಾರೆ 370 ಕೊಠಡಿಗಳು ಮತ್ತು 14 ಶೌಚಾಲಯಗಳು ಇದೆ. ಕಲ್ಲುಗಳನ್ನು ಬಳಸಿ ಕಟ್ಟಿದ ಮಹಲು ವಿಧಾನಸೌಧ. ವಾಟರ್ ಜೆಟ್ ಕ್ಲೀನಿಂಗ್ ಮಾಡಿದರೆ ಸಾಕಾಗುತ್ತದೆ. 

ಸ್ವಚ್ಛತೆಯ ಈ ಖರ್ಚುವೆಚ್ಚ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಮಾತನಾಡಿಸಿದಾಗ ಕರ್ನಾಟಕ ರಾಜ್ಯ ನೌಕರರ ಸಚಿವಾಲಯ ಒಕ್ಕೂಟದ ಅಧ್ಯಕ್ಷ ಗುರುಸ್ವಾಮಿ, ಇದು ಆಡಳಿತಾತ್ಮಕ ವಿಷಯವಾಗಿರುವುದರಿಂದ ನಾವು ಆಕ್ಷೇಪ ನುಡಿಯುವುದಿಲ್ಲ ಎಂದಿದ್ದಾರೆ.

ಗೋಡೆ ಸ್ವಚ್ಛಗೊಳಿಸುವುದು ಅಷ್ಟು ಪ್ರಾಮುಖ್ಯವೇ?: ವಿಧಾನ ಸೌಧ, ವಿಕಾಸ ಸೌಧ ಮತ್ತು ಎಂಎಸ್ ಬಿಲ್ಡಿಂಗ್ ನಲ್ಲಿ 1,200 ಖಾಲಿ ಹುದ್ದೆಗಳಿವೆ. ಅದನ್ನು ಭರ್ತಿಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಉದ್ಯೋಗಿಗಳ ಕೊರತೆಯಿಂದಾಗಿ ಈಗಿರುವ ನೌಕರರ ಮೇಲೆ ಕೆಲಸದ ಹೊರೆ ಹೆಚ್ಚಾಗಿದೆ. ಸರ್ಕಾರವನ್ನು ಕೇಳಿದರೆ ಹಣಕಾಸಿನ ಕೊರತೆಯಿದೆ ಎನ್ನುತ್ತಾರೆ, ಹೀಗಿರುವಾಗ ಗೋಡೆ, ಕಾರಿಡಾರ್ ಸ್ವಚ್ಛ ಮಾಡಲು ಇಷ್ಟೊಂದು ಹಣ ಬೇಕೆ ಎಂದು ಗುರುಸ್ವಾಮಿ ಪ್ರಶ್ನಿಸುತ್ತಾರೆ.

ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳ ವಿಭಾಗದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕಸ ಗುಡಿಸುವವರ ಹುದ್ದೆಗೆ ಅನುಮೋದನೆಗೊಂಡದ್ದು 84 ಹುದ್ದೆಗಳು, ಆದರೆ ವರ್ಷಗಳು ಕಳೆದಂತೆ ಹಲವರು ನಿವೃತ್ತಿಯಾಗಿದ್ದು ನಂತರ ನೇಮಕಾತಿ ನಡೆದಿಲ್ಲ. ವಿಧಾನಸೌಧದ 14 ಶೌಚಾಲಯಗಳನ್ನು ಸ್ವಚ್ಛ ಮಾಡಲು 14 ಹೊರಗುತ್ತಿಗೆ ಸಿಬ್ಬಂದಿ ಇರುತ್ತಾರೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com