ನಿಯಮ ಕಠಿಣಗೊಳಿಸಿದ ಬಿಬಿಎಂಪಿ: ಮಾಸ್ಕ್ ಇಲ್ಲದೇ ಗ್ರಾಹಕರನ್ನು ಮಳಿಗೆಗಳ ಬಳಿ ಅನುಮತಿಸಿದರೆ 1 ಲಕ್ಷ ರೂ ವರೆಗೂ ದಂಡ

ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ನ ಎರಡನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ನಿಯಮಗಳನ್ನು ಕಠಿಣಗೊಳಿಸಿದೆ.
ಮಾಸ್ಕ್ ಮತ್ತು ಮಾರ್ಷಲ್ ಗಳು
ಮಾಸ್ಕ್ ಮತ್ತು ಮಾರ್ಷಲ್ ಗಳು

ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ನ ಎರಡನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ನಿಯಮಗಳನ್ನು ಕಠಿಣಗೊಳಿಸಿದೆ.

ಕೋವಿಡ್‌ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ನಿಯಮ ಉಲ್ಲಂಘಿಸುವ ಹೋಟೆಲ್‌ ಹಾಗೂ ಉದ್ದಿಮೆಗಳಿಗೆ  5 ಸಾವಿರ ರೂದಿಂದ 1 ಲಕ್ಷ ರೂವರೆಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಈ ಕುರಿತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು  ಶನಿವಾರ ಸುತ್ತೋಲೆ ಹೊರಡಿಸಿದ್ದು,  ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಹರಡದಂತೆ ತಡೆಯಲು ಜನರು ಪರಸ್ಪರ ಅಂತರ ಕಾಪಾಡುವುದನ್ನು ಹಾಗೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ನಲ್ಲಿ ಕೈತೊಳೆದ ಬಳಿಕವೇ ಒಳಗೆ  ಪ್ರವೇಶಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಪ್ರಸಾದ್ ಅವರು, 'ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನ ಆಧಾರದಲ್ಲಿ ಅಂಗಡಿ ಮಳಿಗೆಗಳು, ಮಾಲ್‌ಗಳು ಹೋಟೆಲ್‌ ರೆಸ್ಟೋರಂಟ್‌, ಕಲ್ಯಾಣ ಮಂಟಪ, ಚಿತ್ರಮಂದಿರಗಳ ವಹಿವಾಟಿಗೆ ಅವಕಾಶ  ಕಲ್ಪಿಸಲಾಗಿದೆ. ಬಹುತೇಕ ಕಡೆ ಕೋವಿಡ್‌ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಇದುವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದವರಿಗೆ ಹಾಗೂ ಸುರಕ್ಷಿತ ಅಂತರ ಕಾಪಾಡದವರಿಗೆ ವ್ಯಕ್ತಿಗತವಾಗಿ ದಂಡ ಹಾಕಲಾಗುತ್ತಿತ್ತು. ಇನ್ನು ಉದ್ದಿಮೆಗಳು ಹಾಗೂ ಸಂಸ್ಥೆಗಳ  ಮಾಲೀಕರಿಗೂ ದಂಡ ವಿಧಿಸಲು ಬಿಬಿಎಂಪಿ ಆರೋಗ್ಯ ನಿರೀಕ್ಷಕರು ಹಾಗೂ ಮಾರ್ಷಲ್‌ಗಳು ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ದಂಡದ ಪ್ರಮಾಣ ಘೋಷಿಸಿದ ಬಿಬಿಎಂಪಿ
ಸ್ವಸಹಾಯ ಪದ್ಧತಿಯ ಹೋಟೆಲ್, ದರ್ಶಿನಿ, ಆಹಾರ ಮಳಿಗೆ, ಸಣ್ಣ ಅಂಗಡಿ, ಮಳಿಗೆ, ಬೀದಿಬದಿಯಲ್ಲಿ ತ್ವರಿತ ಆಹಾರ ಪೂರೈಸುವ ಮಳಿಗೆಗಳಲ್ಲಿ ನಿಯಮ ಉಲ್ಲಂಘನೆ ಮಾಡಿದರೆ 5,000 ರೂ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಅಂತೆಯೇ ಹವಾನಿಯಂತ್ರಣ ವ್ಯವಸ್ಥೆರಹಿತ  ರೆಸ್ಟೋರಂಟ್‌, ಪಾರ್ಟಿ ಹಾಲ್‌, ಅಂಗಡಿ/ಮಳಿಗೆ, ಡಿಪಾರ್ಟ್‌ಮೆಂಟಲ್‌ ಸ್ಟೋರ್‌, ಖಾಸಗಿ ಬಸ್‌ನಿಲ್ದಾಣ, ಇತರ ಸಾರ್ವಜನಿಕ ಸ್ಥಳಗಳಲ್ಲಿ  25,000 ರೂ ದಂಡ, ಹವಾನಿಯಂತ್ರಿತ ರೆಸ್ಟೋರಂಟ್‌, ಪಾರ್ಟಿ ಹಾಲ್‌, ಅಂಗಡಿ/ ಮಳಿಗೆ, ಡಿಪಾರ್ಟ್‌ಮೆಂಟಲ್‌ ಸ್ಟೋರ್ಸ್‌, ಬ್ರ್ಯಾಂಡೆಡ್‌ ಮಳಿಗೆ,  ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌, ಶಾಪಿಂಗ್‌ ಮಾಲ್‌ ಮತ್ತು ಇತರ ಸಾರ್ವಜನಿಕ ಸ್ಥಳ ರೂ. 50,000, 3 ಮತ್ತು ಅದಕ್ಕಿಂತ ಹೆಚ್ಚು ತಾರಾ ಮೌಲ್ಯದ ಹೋಟೆಲ್‌, 500 ಅಥವಾ ಅದಕ್ಕಿಂತ ಹೆಚ್ಚು ಆಸನ ವ್ಯವಸ್ಥೆ ಇರುವ ಕಲ್ಯಾಣ ಮಂಟಪ, ಸಮುದಾಯ ಭವನ ಅಥವಾ ಸಾರ್ವಜನಿಕ  ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದರೆ 1 ಲಕ್ಷ ರೂಗಳ ವರೆಗೆ ದಂಡ ವಿಧಿಸಲಾಗುತ್ತದೆ. ಅಂತೆಯೇ ಸಾರ್ವಜನಿಕ ಸಭೆ,ಸಮಾರಂಭ, ಕಾರ್ಯಕ್ರಮ, ರ‍್ಯಾಲಿ ಕೂಟ, ಆಚರಣೆಗಳ ಆಯೋಜಕರಿಗೆ 50,000 ರೂ ದಂಡ ವಿಧಿಸಲಾಗುತ್ತದೆ ಮತ್ತು ಈ ಪಟ್ಟಿಯಲ್ಲಿರದ ಇತರ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದರೆ 10,000 ರೂಗಿಂತ ಹೆಚ್ಚು ದಂಡ ವಿಧಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ: ಆಯುಕ್ತಕ ಅಸಮಾಧಾನ
ಇದೇ ವೇಳೆ 'ಮಾಲ್‌ಗಳಲ್ಲಿ ಪ್ರವೇಶ ದ್ವಾರದ ಬಳಿ ಮಾತ್ರ ಸ್ಯಾನಿಟೈಸ್‌ ನೀಡುವ ಹಾಗೂ ಗ್ರಾಹಕರ ದೇಹದ ಉಷ್ಣಾಂಶ ತಪಾಸಣೆ ಮಾಡಲಾಗುತ್ತದೆ. ಗ್ರಾಹಕರು ಮಾಲ್‌ಗಳ ಒಳಗೆ ಹೋದ ಬಳಿಕ ಮಾಸ್ಕ್‌ ಧರಿಸುವಿಕೆ ಹಾಗೂ ಅಂತರ ಕಾಪಾಡುವುದರ ಮೇಲೆ ನಿಗಾ ಇಡುವ  ವ್ಯವಸ್ಥೆಗಳಿಲ್ಲ. ಹೋಟೆಲ್‌, ಬಾರ್‌ ಮತ್ತು ರೆಸ್ಟೋರಂಟ್‌ಗಳಲ್ಲೂ ಗ್ರಾಹಕರು ಅಂತರ ಕಾಪಾಡುವುದಕ್ಕೆ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಕೆಲವು ದೇವಸ್ಥಾನಗಳಲ್ಲೂ ಭಾರಿ ಜನಜಂಗುಳಿ ಕಂಡುಬರುತ್ತಿದೆ ಎಂದು ಮಂಜುನಾಥ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

'ಚಳಿಗಾಲದಲ್ಲಿ ಕೋವಿಡ್‌ ಹರಡುವ ಸಾಧ್ಯತೆ ಹೆಚ್ಚು ಎಂದು ತಜ್ಞರು ತಿಳಿಸಿದ್ದಾರೆ. ಹೆಚ್ಚು ಜನ ಒಂದೇ ಕಡೆ ಸೇರುವ ಹೋಟೆಲ್‌, ಮಾಲ್‌, ಚಿತ್ರಮಂದಿರ, ಸಭಾಂಗಣಗಳು, ಕಲ್ಯಾಣಮಂಟಪಗಳಲ್ಲಿ ಕೋವಿಡ್‌ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಾರದೇ ಹೋದರೆ,  ಇವುಗಳೇ ಈ ಸೋಂಕನ್ನು ವ್ಯಾಪಕವಾಗಿ ಹಬ್ಬಿಸುವ ತಾಣಗಳಾಗುವ ಅಪಾಯವಿದೆ. ಸ್ವಲ್ಪ ಅಸಡ್ಡೆ ವಹಿಸಿದರೂ ಭಾರಿ ಬೆಲೆ ತೆರಬೇಕಾಗುತ್ತದೆ. ಲಾಕ್‌ಡೌನ್‌ ತೆರವಾದ ಬಳಿಕ ಮದುವೆ ಮತ್ತಿತರ ಸಮಾರಂಭಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳ ಕಂಡಿದೆ. ಸಮಾರಂಭದಲ್ಲಿ ಹೋಟೆಲ್‌  ಅಥವಾ ಕಲ್ಯಾಣ ಮಂಟಪಗಳ ಒಟ್ಟು ಆಸನ ಸಾಮರ್ಥ್ಯದ ಶೇ 50ರಷ್ಟು ಮಂದಿ ಅಥವಾ ಗರಿಷ್ಠ 200 ಮಂದಿ ಭಾಗವಹಿಸುವುದಕ್ಕೆ ಮಾತ್ರ ಷರತ್ತುಬದ್ಧ ಅನುಮತಿ ನೀಡಲಾಗುತ್ತಿದೆ. ಸಮಾರಂಭಗಳಲ್ಲಿ ಅನುಮತಿ ಪಡೆದುದಕ್ಕಿಂತ ಹೆಚ್ಚು ಜನ ಸೇರುತ್ತಿರುವುದು ಗಮನಕ್ಕೆ ಬಂದಿದೆ.  ಕೆಲವು ತಾರಾ ಹೋಟೆಲ್‌ಗಳಲ್ಲಿ ಒಂದೇ ದಿನದಲ್ಲಿ ಐದಾರು ಮದುವೆಗಳು ನಡೆಯುತ್ತಿವೆ.ಕೋವಿಡ್‌ ನಿಯಂತ್ರಣ ನಿಯಮಗಳನ್ನು ಕಡೆಗಣಿಸಲಾಗುತ್ತಿದೆ. ಮದುವೆ ಸಮಾರಂಭಕ್ಕೆ  ಅನುಮತಿ ಪಡೆಯುವವರ ಜೊತೆಗೆ ಇವುಗಳಿಗೆ ಸ್ಥಳಾವಕಾಶ ಕಲ್ಪಿಸುವ ಹೋಟೆಲ್‌ಗಳು, ಕಲ್ಯಾಣ  ಮಂಟಪಗಳ ಮಾಲೀಕರಿಗೂ ಈ ಬಗ್ಗೆ ಜವಾಬ್ದಾರಿ ಇದೆ. ಅವರು ತನ್ನ ಹೊಣೆಯನ್ನು ಸರಿಯಾಗಿ ನಿಭಾಯಿಸದೇ ಇದ್ದಾಗ ದಂಡ ವಿಧಿಸುವುದು ಅನಿವಾರ್ಯ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com