ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರದ ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅನುಷ್ಠಾನದಲ್ಲಿ ಗೋಲ್ ಮಾಲ್ ನಡೆದಿದ್ದು, ಲಕ್ಷಾಂತರ ಹಣ ಗುಳುಂ ಮಾಡಲಾಗಿದೆ.
ಯೋಜನೆ ಅನುಷ್ಠಾನಗೊಳಿಸುತ್ತಿರುವ ಸರ್ಕಾರಿ ಗುತ್ತಿಗೆ ಸಂಸ್ಥೆ ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಲಿಮೆಟೆಡ್ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ರಾಮನಗರ ಉಪ ನಗರ ಉಪ ವಿಭಾಗ ನೀಡಿರುವ ಮಾಹಿತಿಯಲ್ಲಿ ಈ ಅವ್ಯವಹಾರ ಅಕ್ರಮ ಬೆಳಕಿಗೆ ಬಂದಿದೆ.
ಸೀಗೇ ಕುಪ್ಪೆ ಗ್ರಾಮದಲ್ಲಿ ಕೆಲವು ಪ್ರದೇಶಗಳಲ್ಲಿ ಕಾಮಗಾರಿ ಆಗದಿದ್ದರೂ ಚರಂಡಿ , ಸಿಮೆಂಟ್ ಕಾಂಕ್ರಿಟ್ , ಡಕ್ ಸ್ಲಾಬ್ ನಿರ್ಮಾಣ ಮಾಡಲಾಗಿದೆ ಎಂದು ನಕಲಿ ಬಿಲ್ ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ. ಸೀಗೇಕುಪ್ಪೆ ಜನತಾ ಕಾಲೋನಿಯಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಿ ಹಣ ಪಡೆದು, ಮತ್ತೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲೂ ಹಣ ದೋಚಿರುವ ಆರೋಪ ಕೇಳಿಬಂದಿದೆ.
ಅರಳೇಮರದೊಡ್ಡಿ ಗ್ರಾಮದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ, ಸದರಿ ಕಾಮಗಾರಿ ಅನುಮೋದನೆಗೊಂಡ ಅಂದಾಜು ಪಟ್ಟಿಯಲ್ಲಿ ಸೇರಿಲ್ಲ ಎಂಬ ಮಾಹಿತಿ ನೀಡಿದ್ದಾರೆ. 14ನೇ ಹಣಕಾಸು ಆಯೋಗದ ವರದಿ ಅನುಸಾರ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗಿರುವ ಅನುದಾನ ದುರ್ಬಳಕೆ ಆರೋಪವೂ ಇದೆ. ಇದರಡಿ ಕೈಗೊಳ್ಳಲಾದ ಕಾಮಗಾರಿಗಳ ಕ್ರಿಯಾ ಯೋಜನೆ ನೀಡಲು ಅಧಿಕಾರಿಗಳು ಸತಾಯಿಸುತ್ತಾರೆ. ವಿನಾಕಾರಣ ಕಾಲಹಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
Advertisement