ಬಂಡವಾಳ ಹೂಡಿಕೆಯಲ್ಲಿ ರಾಜ್ಯವನ್ನು ನಂ.1 ಸ್ಥಾನಕ್ಕೆ ತರಲು ಉದ್ಯಮಗಳು ಸಹಾಯ ಮಾಡಲಿ: ಸಿಎಂ ಯಡಿಯೂರಪ್ಪ

ಕೈಗಾರಿಕೋದ್ಯಮಗಳು ಕರ್ನಾಟಕವನ್ನು ಹೂಡಿಕೆಯಲ್ಲಿ ನಂ.1 ರಾಜ್ಯವನ್ನಾಗಿ ಮಾಡಲು ಸಹಾಯ ಮಾಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಕೈಗಾರಿಕೋದ್ಯಮಗಳು ಕರ್ನಾಟಕವನ್ನು ಬಂಡವಾಳ ಹೂಡಿಕೆಯಲ್ಲಿ ನಂ.1 ರಾಜ್ಯವನ್ನಾಗಿ ಮಾಡಲು ಸಹಾಯ ಮಾಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. 

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ 103ನೇ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಪರಿಸ್ಥಿತಿಯಲ್ಲೂ, ಶೇಕಡಾ 42ರಷ್ಟು ವಿದೇಶಿ ನೇರ ಬಂಡವಾಳವು (ಎಫ್ಡಿtಐ) ಕರ್ನಾಟಕಕ್ಕೆ ಬಂದಿದೆ. ಇತ್ತೀಚೆಗೆ ಕರ್ನಾಟಕ ಸರ್ಕಾರವು, ಭೂ-ಸುಧಾರಣಾ ಕಾಯ್ದೆಯಲ್ಲಿ ಸುಧಾರಣೆಗಳನ್ನು ತಂದ ಕ್ರಾಂತಿಕಾರಿ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಕೈಗಾರಿಕೋದ್ಯಮಗಳಿಗೆ ಭೂಮಿ ಖರೀದಿ ಸುಲಭವಾಗಿದೆ ಎಂದು ಹೇಳಿದ್ದಾರೆ. 

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಉದ್ಯಮ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬರುತ್ತಿದೆ. ಬೆಂಗಳೂರಿನಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯರವರ ಅಮೃತಹಸ್ತದಿಂದ ಸ್ಥಾಪಿತವಾದ ಈ ಮಹಾನ್ ಸಂಸ್ಥೆಯ 103ನೇಯ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಲು ಸಂತೋಷವೆನಿಸುತ್ತದೆ. ರಾಜ್ಯವು ಆರ್ಥಿಕ ಬೆಳೆವಣಿಗೆ ಸಾಧಿಸಲು ಎಫ್.ಕೆ.ಸಿ.ಸಿ.ಐ. ಗಣನೀಯ ಕೊಡುಗೆಯನ್ನು ನೀಡುತ್ತಿದೆ. ರಾಜ್ಯವೊಂದರ ಆರ್ಥಿಕ ಪ್ರಗತಿಯಲ್ಲಿ ಕೈಗಾರಿಕೀಕರಣವು ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ. ಕರ್ನಾಟಕ ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಸಾರ್ವಜನಿಕ ವಲಯ, ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ವಲಯಗಳಲ್ಲಿ ಪ್ರಾಬಲ್ಯ ಹೊಂದಿದೆ ಎಂದರು.

ಕೊರೋನಾ ವೈರಸ್ ಸಾಂಕ್ರಾಮಿಕವು ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುವುದರ ಜೊತೆಗೆ ಜಾಗತಿಕ ಆರ್ಥಿಕತೆಯನ್ನು ಅತ್ಯಂತ ಬಿಕ್ಕಟ್ಟಿನತ್ತ ಕೊಂಡೊಯ್ದಿದೆ. ಈಗ ಆರ್ಥಿಕ ಚಟುವಟಿಕೆ ಮತ್ತು ಸರಬರಾಜು ಸರಪಳಿಗಳು ನಿಧಾನವಾಗಿ ಸಹಜ ಸ್ಥಿತಿಗೆ ಬರಲು ಆರಂಭಿಸಿದೆ. ಪ್ರಸ್ತುತ ಸನ್ನಿವೇಶದ ಮಧ್ಯೆ ವಾಣಿಜ್ಯ ಸಂಸ್ಥೆಗಳು, ಎಂ.ಎಸ್.ಎಂ.ಇ ವಲಯಗಳು ಮತ್ತು ದೊಡ್ಡ ಉದ್ದಿಮೆದಾರರು ಈಗ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದು ಆಶಾದಾಯಕ ಬೆಳವಣಿಗೆ. ಕೋವಿಡ್-19 ರಿಂದಾದ ಅನಾನುಕೂಲಗಳ ತೀವ್ರತೆಯನ್ನು ತಗ್ಗಿಸಲು, ಆರ್ಥಿಕ ಒತ್ತಡವನ್ನು ನಿವಾರಿಸಲು, ಆರ್ಥಿಕ ಬೆಳೆವಣಿಗೆಯನ್ನು ಸಾಧಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಲು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಈಗಾಗಲೇ ಸೂಕ್ತ ಪರಿಹಾರ ಮತ್ತು ಉತ್ತೇಜನ ಪ್ಯಾಕೇಜ್ಗುಳನ್ನು ಘೋಷಿಸಿವೆ. ಇದು ಉದ್ಯಮಿಗಳ ವಿಶ್ವಾಸವನ್ನು ಹೆಚ್ಚಿಸಿ, ಅವರ ಹಣಕಾಸಿನ ಸ್ಥಿತಿಯನ್ನು ಉತ್ತಮಪಡಿಸಲು ಸಹಕಾರಿಯಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಇಂತಹ ಪರಿಸ್ಥಿತಿಯಲ್ಲೂ, ಶೇಕಡಾ 42ರಷ್ಟು ವಿದೇಶಿ ನೇರ ಬಂಡವಾಳವು (ಎಫ್ಡಿ್ಐ) ಕರ್ನಾಟಕಕ್ಕೆ ಬಂದಿರುವುದು ಸಂತೋಷ ಪಡುವ ವಿಚಾರವಾಗಿದೆ. ಇತ್ತೀಚೆಗೆ ಕರ್ನಾಟಕ ಸರ್ಕಾರವು, ಭೂ-ಸುಧಾರಣಾ ಕಾಯ್ದೆಯಲ್ಲಿ ಸುಧಾರಣೆಗಳನ್ನು ತರುವ ಮೂಲಕ ತಂದದಿಟ್ಟ ಮತ್ತು ಕ್ರಾಂತಿಕಾರಿ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಕೈಗಾರಿಕೋದ್ಯಮಗಳಿಗೆ ಭೂಮಿ ಖರೀದಿ ಸುಲಭವಾಗಿದೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಅಡಿಯಲ್ಲಿ, ರಾಜ್ಯ ಸರ್ಕಾರವು ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಪ್ರಕಾರ ಯಾವುದೇ ಉದ್ಯಮವನ್ನು ಪ್ರಾರಂಭಿಸಲು ವಿವಿಧ ಪರವಾನಗಿಗಳ ತಕ್ಷಣದ ಅನುಮೋದನೆಯನ್ನು ರದ್ದುಪಡಿಸಲಾಗಿದೆ ಮತ್ತು ಅದರ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು 3 ವರ್ಷದೊಳಗೆ ಪಡೆಯಬಹುದು. ಅದೇ ರೀತಿ ಕಾರ್ಮಿಕ ಕಾಯ್ದೆಗೆ ಸುಧಾರಣೆಗಳನ್ನು ತರುವಲ್ಲಿಯೂ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಕರ್ನಾಟಕ ಸರ್ಕಾರ, ಇಡೀ ಕೈಗಾರಿಕಾ ಸಮೂಹದ ಪರವಾಗಿ “ಹೊಸ ಕೈಗಾರಿಕಾ ನೀತಿ 2020-25” ಅನ್ನು ಪ್ರಕಟಿಸುವ ಮೂಲಕ ಮತ್ತು ವಿವಿಧ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಗಮನಾರ್ಹ ಸುಧಾರಣೆಗಳನ್ನು ತಂದು ಆರ್ಥಿಕತೆ ಬೆಳವಣಿಗೆಗೆ ಪ್ರಯತ್ನವನ್ನು ಮಾಡಿದೆ. ಇವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಗಾರಿಕಾ ಸಂಘ-ಸಂಸ್ಥೆಗಳು ಮತ್ತು ಉದ್ಯಮಿಗಳ ಸಹಕಾರವೂ ಅತಿ ಅಗತ್ಯವಾಗಿದೆ. ರಾಜ್ಯದ ಆರ್ಥಿಕ ಮತ್ತು ಕೈಗಾರಿಕೆಗಳ ಬೆಳವಣೆಗೆಗೆ ಪೂರಕವಾಗಿ ಈ ಸಂಸ್ಥೆಯ ಎಲ್ಲಾ ಸದಸ್ಯರು ಕೆಲಸ ಮಾಡಿ ನಮ್ಮ ರಾಜ್ಯವನ್ನು Favourable Investment Destination ಆಗಿ ಒಂದನೇ ಸ್ಥಾನದಲ್ಲಿ ನಿಲ್ಲಿಸಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com