ಬೆಂಗಳೂರು: ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವತಿಯಿಂದ ನಡೆಸಲು ತೀರ್ಮಾನಿಸಿರುವ ಸಪ್ತಪದಿ ಯೋಜನೆಯನ್ನು ಹೊಸ ವರ್ಷದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.
ಜನವರಿ 15, 20 ಹಾಗೂ ಫೆಬ್ರವರಿ 17 ಮತ್ತು 25 ರಂದು ಸಾಮೂಹಿಕ ಸಪ್ತಪದಿ ವಿವಾಹ ಕಾರ್ಯಕ್ರಮ ಏರ್ಪಡಿಸಲು ಸರ್ಕಾರ ನಿರ್ಧರಿಸಿದೆ.
2019-20ನೇ ಸಾಲಿನಲ್ಲಿ ರಾಜ್ಯದ 100 ಮುಜರಾಯಿ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ಸಪ್ತಪದಿ ಮದುವೆ ಕಾರ್ಯಕ್ರಮ ಹಾಕಿಕೊಳ್ಳಲು ನಿರ್ಧರಿಸಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಸಪ್ತಪದಿ ಯೋಜನೆಗೆ ಮತ್ತೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಸಪ್ತಪದಿ ಸಾಮೂಹಿಕ ವಿವಾಹ ನಡೆಸಲು ಸರ್ಕಾರ ಈಗಾಗಲೇ ನೀಡಿರುವ ದಿನಾಂಕಗಳಂದು ಕಾರ್ಯಕ್ರಮ ನೆರವೇರಿಸಲು ಸಾಧ್ಯವಾಗದಿದ್ದಲ್ಲಿ, ಧಾರ್ಮಿಕ ಪರಿಷತ್ತಿನ ಆಗಮ ಪಂಡಿತರು ಇತರ ಅನುಕೂಲಕರ ದಿನಾಂಕ ಬಯಸಿದಲ್ಲಿ ಜಿಲ್ಲಾಡಳಿತದಿಂದ ಸೂಕ್ತ ದಿನಾಂಕ ನಿಗದಿಪಡಿಸಿಕೊಂಡು ಕಾರ್ಯಕ್ರಮ ರೂಪಿಸಲು ಸೂಚಿಸಲಾಗಿದೆ.
ಪ್ರತಿ ತಿಂಗಳು 1ನೇ ತಾರಿಖಿನಿಂದ ತಿಂಗಳ ಕೊನೆಯವರೆಗೂ ನೋಂದಣಿ ಮಾಡಿಕೊಂಡವರನ್ನು ಮುಂದಿನ ತಿಂಗಳ ಮುಹೂರ್ತ ದಿನಾಂಕಗಳಲ್ಲಿ ಯಾವುದಾದರೂ ದಿನಾಂಕದಂದು ಸಾಮೂಹಿಕ ವಿವಾಹ ನಡೆಸುವಂತೆ ಸೂಚಿಸಲಾಗಿದೆ.
ಸಪ್ತಪದಿ ಯೋಜನೆಯಡಿ ಬಡ ವಧು ವರರಿಗೆ ಸರ್ಕಾರದಿಂದ ಉಚಿತ ವಿವಾಹ ಭಾಗ್ಯ ನೀಡಲಾಗುತ್ತಿದ್ದು, ಕಳೆದ ಏಪ್ರಿಲ್ 26 ರಂದು ಸಪ್ತಪದಿ ಯೋಜನೆಯಡಿ 1.5 ಸಾವಿರ ವಧು ವರರು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು. ಆದರೆ ಕೊರೋನಾದಿಂದ ಸಪ್ತಪದಿ ಯೋಜನೆ ಮುಂದೂಡಿಕೆಯಾಗಿತ್ತು.
Advertisement