ಬೆಂಗಳೂರು: ಕಳೆದ ಒಂಬತ್ತು ದಿನಗಳಲ್ಲಿ ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಚಿನ್ನ ಕಳ್ಳಸಾಗಣೆ ಮಾಡಿದ ಐದು ನಿದರ್ಶನಗಳನ್ನು ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.ಮಾರುಕಟ್ಟೆಯಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಒಟ್ಟು 1.9 ಕೆಜಿ ಆಭರಣ ಚಿನ್ನ ಹಾಗೂ ಕಚ್ಚಾ ಚಿನ್ನವನ್ನು ಅವರಿಂದ ವಶಕ್ಕೆ ಪಡೆಯಲಾಗಿದೆ.
ಡಿಸೆಂಬರ್ 9 ಮತ್ತು 17 ರ ನಡುವೆ ಕಸ್ಟಮ್ಸ್ ಕಾಯ್ದೆಯಡಿ ಒಟ್ಟು 1,924.87 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ
ಈ ಬಾರಿ ವಂಚಕರು ಚಿನ್ನದ ಕಳ್ಳಸಾಗಣೆ ನಡೆಸಲುನವೀನ ವಿಧಾನಗಳನ್ನು ಬಳಸುತ್ತಿದ್ದಾರೆ. ಕ್ರೀಂ ಬಾಟಲಿಗಳ ತಳಭಾಗದಲ್ಲಿ ಚಿನ್ನವನ್ನಿಟ್ಟು ಸಾಗಿಸುತ್ತಾರೆ. "ನಾವು ಮೇಲಿನ ಕ್ರೀಂ ಅನ್ನು ತೆಗೆದಾಗ ಕೆಳಭಾಗದಲ್ಲಿ ಚಿನ್ನವನ್ನು ಕಂಡುಕೊಂಡಿದ್ದೇವೆ. ಡಿಸೆಂಬರ್ 17 ರಂದು ಎಮಿರೇಟ್ಸ್ ವಿಮಾನದ ಪ್ರಯಾಣಿಕ ಇಂತಹಾ ಚಿನ್ನದ ಕಳ್ಳಸಾಗಣೆಯಲ್ಲಿ ತಿಡಗಿದ್ದು ಪತ್ತೆಯಾಗಿದೆ”ಎಂದು ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.
ಮೊಬೈಲ್ ಫೋನ್ಗಳ ಟಚ್ಸ್ಕ್ರೀನ್ ಫಲಕದ ಕೆಳಗೆ ಚಿನ್ನವಿಟ್ಟು ಸಾಗಿಸುವ ಬಗೆಗೆ ತಿಳಿದುಬಂದಿದ್ದು ಇದೊಂದು ಹೊಸ ವಿಧಾನ. ಗುದನಾಳದೊಳಗೆ ಮರೆಮಾಚುವಿಕೆ, ನೈಲ್ ಕ್ಲಿಪ್ಪರ್ಗಳು, ಮಹಿಳೆಯರ ಕೈಚೀಲಗಳಲ್ಲಿನ ಲೋಹದ ಭಾಗಗಳಂತಹ ಸಾಮಾನ್ಯ ವಿಧಾನಗಳು ಸಹ ಮುಂದುವರಿದಿದೆ. "ಡಿಸೆಂಬರ್ 11 ರಂದು ಸಿಕ್ಕಿಬಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ (ಐಎಕ್ಸ್ 1246) ಇಬ್ಬರು ಪ್ರಯಾಣಿಕರು ಗುದನಾಳದಲ್ಲಿ ಸುಮಾರು 500 ಗ್ರಾಂ ಅನ್ನು ಪೇಸ್ಟ್ ರೂಪದಲ್ಲಿಟ್ಟು ಸಾಗಿಸುತ್ತಿದ್ದರು." ಎಂದು ಅಧಿಕಾರಿಯೊಬ್ಬರು ಹೇಳೀದ್ದಾರೆ. 900.36 ಗ್ರಾಂ ಚಿನ್ನ ವಶಕ್ಕೆ ಪಡೆಯಲಾದ ಚಿನ್ನದ ಪೈಕಿ ಅತಿಹೆಚ್ಚಿನ ಪ್ರಮಾಣದ್ದಾಗಿದೆ. ಡಿಸೆಂಬರ್ 9 ರಂದು ಇಂಡಿಗೊ ವಿಮಾನದಲ್ಲಿ (6 ಇ 096) ಪ್ರಯಾಣಿಸಿದ್ದ ಪ್ರಯಾಣಿಕರಿಂದ ಇದನ್ನು ವಶಪಡಿಸಿಕೊಳ್ಳಲಾಗಿದೆ.
Advertisement