ಬೆಂಗಳೂರು: ಕೇಂದ್ರ ಸರ್ಕಾರವು ರೈತರಿಗೆ ಅದರಲ್ಲೂ ಕಬ್ಬು ಮತ್ತು ಭತ್ತ ಬೆಳೆಯುವವರ ಹಿತಾಸಕ್ತಿಯನ್ನು ಕಾಪಾಡಲು ಎಥನಾಲ್ ನೀತಿಯನ್ನು ರೂಪಿಸುವುದಾಗಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ, ರಸ್ತೆ ಸಾರಿಗೆ, ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ರಾಜ್ಯದಲ್ಲಿ 10,904 ಕೋಟಿ ರೂ. ವೆಚ್ಚದಲ್ಲಿ 1,197 ಕಿ.ಮೀ. ಉದ್ದದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯನ್ನು ಇಂದು ನಡೆದ ವರ್ಚುಯಲ್ ಕಾರ್ಯಕ್ರಮದ ಮೂಲಕ ಅವರು ನೆರವೇರಿಸಿದರು.
ಕಬ್ಬು ಮತ್ತು ಭತ್ತ ಬೆಳೆಯುವವರ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸಕ್ಕರೆ ಮತ್ತು ಅಕ್ಕಿಯ ಉತ್ಪಾದನೆ ದೇಶದಲ್ಲಿ ಅಧಿಕವಾಗಿರುವುದರಿಂದ ರೈತರಿಗೆ ನೆರವಾಗಲು ಭಾರತ ಸರ್ಕಾರ ಕಬ್ಬು ಹಾಗೂ ಅಕ್ಕಿಯಿಂದ ಎಥನಾಲ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆಯು ಮುಂಬರುವ ವರ್ಷಗಳಲ್ಲಿ ಕರ್ನಾಟಕದಲ್ಲಿ ಅಂದಾಜು 1,16,144 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದ ಅವರು ಭಾರತ್ಮಾಲಾ ಮತ್ತಿತರ ಯೋಜನೆಗಳಡಿಯಲ್ಲಿ 31,035 ಕೋಟಿ ರೂ.ಗಳ ವೆಚ್ಚದಲ್ಲಿ 19 ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದರು.
ಬಂದರುಗಳಿಗೆ ಸುಲಭ ಸಂಪರ್ಕವನ್ನು ಕಲ್ಪಿಸಿ ವ್ಯಾಪಾರ ಮತ್ತು ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗೋವಾ ಗಡಿಯಿಂದ ಕೇರಳದ ಗಡಿಯವರೆಗಿನ ಸಂಪೂರ್ಣ ಕರಾವಳಿ ರಸ್ತೆಯನ್ನು ಬೇಲೇಕೇರಿ, ಕಾರವಾರ ಮತ್ತು ಮಂಗಳೂರು ಬಂದರುಗಳೊಂದಿಗೆ ಸಂಪರ್ಕಿಸುವ 278 ಕಿ.ಮೀ. ಉದ್ದದ ಕಾಮಗಾರಿಯನ್ನು 3443 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದ್ದು ಬಹುತೇಕ ಪೂರ್ಣಗೊಳಿಸಲಾಗಿದೆ.
ರಸ್ತೆ ಬಳಕೆದಾರರ ಸುರಕ್ಷತೆಯ ದೃಷ್ಠಿಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ಶಿರಾಡಿ ಘಾಟ್, ರಾ.ಹೆ.73 ರ ಚಾರ್ಮಾಡಿ ಘಾಟ್ ಹಾಗೂ ರಾ.ಹೆ.275 ರಲ್ಲಿರುವ ಸಂಪಾಜೆ ಘಾಟ್ನ ಇಳಿಜಾರುಗಳಲ್ಲಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು 115 ಕೋಟಿ ರೂ.ಗಳ ವೆಚ್ಚದ ಮೂರು ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ.
ದಾಬಸ್ಪೇಟೆ ಬಳಿಯ ಮುದ್ದಲಿಂಗೇನಹಳ್ಳಿಯಲ್ಲಿ ಬಹುವಿಧ ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪನೆಯ ಕುರಿತ ಅಂತಿಮ ಕಾರ್ಯಸಾಧ್ಯತಾ ವರದಿ ಫೆಬ್ರವರಿ 2021ರಲ್ಲಿ ಸಲ್ಲಿಸುವ ನಿರೀಕ್ಷೆಯಿದೆ ಎಂದರು. ಈ ಯೋಜನೆಯು ಲಾಜಿಸ್ಟಿಕ್ಸ್ನ ದಕ್ಷತೆಯನ್ನು ಹೆಚ್ಚಿಸಲಿದ್ದು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ಅವರು ತಿಳಿಸಿದರು.
Advertisement