ಬೆಂಗಳೂರು: ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದ ನಡುವಲ್ಲೇ ಇದೀಗ ರಾಜ್ಯದಲ್ಲೂ ಉಚಿತ ಲಸಿಕೆ ನೀಡುವ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸುಳಿವು ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದಲೂ ರಾಜ್ಯದಲ್ಲಿ ಉಚಿತ ಕೊರೋನಾ ಪರೀಕ್ಷೆ ಹಾಗೂ ಉಚಿತ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಈ ವರೆಗೂ ರಾಜ್ಯದಲ್ಲಿ 1.20 ಕೋಟಿ ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಕರ್ನಾಟಕ ಸರ್ಕಾರ ಬಹಳ ಕಾರ್ಯಪ್ರವೃತ್ತವಾಗಿದ್ದು, ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧವಾಗಿದೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳಲ್ಲಿ ಒಬ್ಬರು ಲಸಿಕೆಯನ್ನು ಜನರ ಹಿತದೃಷ್ಟಿಯಿಂದ ನೋಡಿಕೊಳ್ಳಲಿದೆಯೇ ಹೊರತು ಹಣದ ದೃಷ್ಟಿಯಿಂದಲ್ಲ ಎಂಬುದನ್ನು ಖಚಿತಪಡಿಸುತ್ತೇನೆಂದು ಹೇಳಿದ್ದಾರೆ.
ಈ ಬಗ್ಗೆ ಹಿರಿಯ ವೈದ್ಯರೊಬ್ಬರು ಪ್ರತಿಕ್ರಿಯೆ ನೀಡಿ, ಸಚಿವರ ಹೇಳಿಕೆಯು ಲಸಿಕೆ ಬಂದ ಕೂಡಲೇ ಮೊದಲ ಆದ್ಯತೆ ನೀಡುವ ಆರೋಗ್ಯ ಕಾರ್ಯಕರ್ತರ ಕುರಿತಂತೆ ಆಗಿರಬಹುದು ಎಂದು ಹೇಳಿದ್ದಾರೆ.
ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಡಿ ಸರ್ಕಾರ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಹಲವಾರು ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದೆ. ಸಾಂಕ್ರಾಮಿಕ ರೋಗಗಳು ಸೃಷ್ಟಿಗೊಂಡಾಗ ಲಸಿಕೆ ಅಭಿವೃದ್ಧಿ ಹಾಗೂ ವಿತರಣೆಗಳು ಅಂತರಾಷ್ಟ್ರೀಯ ಹಣಕಾಸು ಒಪ್ಪಂದ ಕುರಿತು ಕೇಂದ್ರಕ್ಕೆ ಸ್ಪಷ್ಟ ಚಿತ್ರಣಗಳಿರುವುದಿಲ್ಲ.
ಭಾರತದ ಯುನಿಸೆಫ್ನ ಮಾಜಿ ಆರೋಗ್ಯ ಮತ್ತು ಪೌಷ್ಠಿಕಾಂಶ ತಜ್ಞ ಮತ್ತು ಸಾರ್ವಜನಿಕ ಆರೋಗ್ಯ ಸಂಪನ್ಮೂಲ ಜಾಲದ ಭಾರತೀಯ ಸಾರ್ವಜನಿಕ ಆರೋಗ್ಯ ಸಂಘದ ಜೀವನ ಸದಸ್ಯ ಡಾ.ಕೆ.ಆರ್. ಆ್ಯಂಟನಿ, ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆಯನ್ನು ಘೋಷಣೆ ಮಾಡಿಲ್ಲ. ಹಾಗೆಂದು ಜನರಿಗೆ ಲಸಿಕೆಗೆ ಹಣ ನೀಡಬೇಕೆಂದೂ ಕೂಡ ಹೇಳಿಲ್ಲ. ಲಸಿಕೆಗಳ ಬೆಲೆಯನ್ನು ಗಮನಿಸಿ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಸಂಪೂರ್ಣ ಯೋಜನೆಗೆ ರೂ.6 ಲಕ್ಷ ಕೋಟಿಯ ಅಗತ್ಯವಿದೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರೋಗ್ಯ ಕಾರ್ಯಕರ್ತರು ಲಸಿಕೆಗೆ ಹಣ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎರಡನೇ ಅಲೆಯನ್ನು ಗಮನಿಸಬೇಕಿದೆ. ಈಗಾಗಲೇ ರಾಜ್ಯ ಸರ್ಕಾರ ಆರ್'ಟಿ-ಪಿಸಿಆರ್ ಪರೀಕ್ಷೆಗಳ ದರವನ್ನು ರೂ.1,200ರಿಂದ ರೂ.800ಕ್ಕೆ ಇಳಿಸಿದೆ. ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಾಲಯಕ್ಕೆ ಬಂದರೆ ಪರೀಕ್ಷೆಗೆ ರೂ.500 ಪಡೆಯಲಾಗುತ್ತಿದೆ. ಲಸಿಕೆ ಪ್ರಯೋಗ ಹಾಗೂ ಉಚಿತ ಚಿಕಿತ್ಸೆಗಾಗಿ ಸರ್ಕಾರ ರೂ.300 ಕೋಟಿ ಮೀಸಲಿಟ್ಟಿದೆ. ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಉಚಿತ ಕೊರೋನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement