ಸಪ್ತಪದಿ ಯೋಜನೆಗೆ ಸರ್ಕಾರದ ಮೂಹೂರ್ತ ಫಿಕ್ಸ್: ತಿಂಗಳಲ್ಲಿ ಎರಡು ಬಾರಿ ಸಾಮೂಹಿಕ ವಿವಾಹ
ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ವರ್ಷಕ್ಕೆ ಎರಡು ಬಾರಿ ಹಮ್ಮಿಕೊಳ್ಳಲು ಮಾಡಿದ್ದ ನಿರ್ಧಾರವನ್ನು ಕೊರೋನಾ ಕಾರಣದಿಂದ ಮರು ಚಿಂತನೆ ಮಾಡಿ ಬದಲಾಯಿಸಿದೆ.
Published: 24th December 2020 10:23 AM | Last Updated: 24th December 2020 10:23 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ವರ್ಷಕ್ಕೆ ಎರಡು ಬಾರಿ ಹಮ್ಮಿಕೊಳ್ಳಲು ಮಾಡಿದ್ದ ನಿರ್ಧಾರವನ್ನು ಕೊರೋನಾ ಕಾರಣದಿಂದ ಮರು ಚಿಂತನೆ ಮಾಡಿ ಬದಲಾಯಿಸಿದೆ.
ಮೊದಲಿಗೆ ವರ್ಷಕ್ಕೆ ಎರಡು ಬಾರಿ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಹೆಚ್ಚಿದ ಜನಸಂಖ್ಯೆಯಿಂದ ಪ್ರತಿ ತಿಂಗಳು ಎರಡು ಬಾರಿ ಸಾಮೂಹಿಕ ವಿವಾಹ ಆಯೋಜಿಸಲು ನಿರ್ಧರಿಸಿದೆ. ಜನವರಿ ತಿಂಗಳಿಂದ ಸಪ್ತಪದಿ ಕಾರ್ಯಕ್ರಮ ಆರಂಭವಾಗಲಿದೆ.
ಪ್ರತಿ ತಿಂಗಳು ಎರಡು ಶುಭ ಮೂಹೂರ್ತದಲ್ಲಿ ಮದುವೆ ನಡೆಸಲಾಗುವುದು, 15 ದಿನ ಮುಂಚಿತವಾಗಿಯೇ ವಿವಾಹಕ್ಕಾಗಿ ನೋಂದಾಯಿಸಿಕೊಳ್ಳಬೇಕಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜನವರಿ 15, 20 ಮತ್ತು ಫೆಬ್ರವರಿ 20 ಮತ್ತು 23 ರಂದು ಸಾಮೂಹಿಕ ವಿವಾಹ ನಡೆಸಲು ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಇದರಿಂದ ಹೆಚ್ಚಿನ ಜನಸಂದಣಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ವಧು ವರ ಮತ್ತು ಅವರ ಪೋಷಕರಿಗೆ ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ವರ್ಷ ಏಪ್ರಿಲ್ 26 ಮತ್ತು ಮೇ 24 ರಂದು ರಾಜ್ಯದಾದ್ಯಂತ 100 ಸರ್ಕಾರಿ ಸ್ವಾಮ್ಯದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಜೂನ್ ಮತ್ತು ಜುಲೈಗೆ ಮುಂದೂಡಲಾಯಿತು, ಮತ್ತೆ ನವೆಂಬರ್ - ಡಿಸೆಂಬರ್ ವರೆಗೆ ಮುಂದೂಡಲಾಯಿತು. ಕನಿಷ್ಠ 250 ದಂಪತಿಗಳ ಸಾಮೂಹಿಕ ವಿವಾಹವನ್ನು ನಡೆಸಲು ಸರ್ಕಾರ ಯೋಜಿಸಿತ್ತು.
ಈ ಯೋಜನೆಯಡಿ ಇತ್ತೀಚೆಗೆ ಕೇವಲ 23 ಜೋಡಿಗಳು ಮಾತ್ರ ವಿವಾಹವಾದರು. ಸರ್ಕಾರಕ್ಕೆ ವಿವಾಹ ಕಾರ್ಯಕ್ರಮ ನಡೆಸಲು ಸಾಧ್ಯವಾಗದ ಕಾರಣ ನೋಂದಾಯಿಸಿದ ಕೆಲವು ದಂಪತಿಗಳು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಮದುಮಗನಿಗೆ ಶರ್ಟ್ ಮತ್ತು ಧೋತಿ ಮತ್ತು 5,000 ರೂ. ನಗದು, ವಧುವಿಗೆ ಸೀರೆ, 1,000 ರೂ ನಗದು ಮತ್ತು 8 ಗ್ರಾಂ ತೂಕದ ಮಂಗಳಸೂತ್ರವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ,