ಬಿಡದಿ: ರಾಮನಗರ ಜಿಲ್ಲೆ ಬಿಡದಿ ಕೈಗಾರಿಕ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹಾಗೂ ಕಾರ್ಮಿಕ ಒಕ್ಕೂಟದ ನಡುವೆ ಕಳೆದ 45 ದಿನಗಳಿಂದ ಹಗ್ಗಜಗ್ಗಾಟ ನಡೆಯುತ್ತಿದ್ದು, ಕಾರ್ಮಿಕರ ಹೋರಾಟಕ್ಕೆ ಸಂಸದ ಡಿಕೆ ಸುರೇಶ್ ಬೆಂಬಲ ಸೂಚಿಸಿದ್ದಾರೆ.
ಕಾರ್ಮಿಕರ ಹೋರಾಟ ವಿರೋಧಿಸಿ ಕಂಪನಿ ಈಗಾಗಲೇ 65 ಜನ ಕಾರ್ಮಿಕರನ್ನ ಕೆಲಸದಿಂದಲೇ ಅಮಾನತು ಮಾಡಿದೆ. ಈ ಕಾರಣ ಸಂಸದ ಡಿ.ಕೆ.ಸುರೇಶ್ ಬಿಡದಿಯ ಈಗಲ್ ಟನ್ ರೆಸಾರ್ಟ್ನಲ್ಲಿ ಟೊಯೋಟಾ ಆಡಳಿತ ಮಂಡಳಿಯ ಪ್ರಮುಖರ ಸಭೆ ನಡೆಸಿದರು.
ಸರಿಸುಮಾರು 2 ಗಂಟೆಗಳ ಕಾಲ ಸಭೆ ನಡೆಸಿದರು ಸಹ ಆಡಳಿತ ಮಂಡಳಿಯವರು ಕಾರ್ಮಿಕರ ಜೊತೆ ರಾಜಿಯಾಗಲು ಒಪ್ಪಿಲ್ಲ. ಈ ಹಿನ್ನೆಲೆ ಸಭೆಯ ನಂತರ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಟೊಯೋಟಾದವರಿಗೆ ಎಷ್ಟೇ ಮನವಿ ಮಾಡಿದರು ಒಪ್ಪುತ್ತಿಲ್ಲ. ಅವರು ಸಂಪೂರ್ಣವಾಗಿ ಕಾರ್ಮಿಕ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಕೂಡ ಇದನ್ನ ಬಗೆಹರಿಸುವುದಕ್ಕೆ ಮುಂದಾಗಿಲ್ಲ. ಜಪಾನ್ನಿಂದ ಬಂದು ಇಲ್ಲಿ ನಮ್ಮ ರೈತರ ಮಕ್ಕಳ ಜೀವನದಲ್ಲಿ ಆಟವಾಡುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾನು ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ. ಅವರ ಎಲ್ಲಾ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಸಲಹೆಯನ್ನು ಕಾರ್ಖಾನೆಯ ಆಡಳಿತ ಮಂಡಳಿ ತಿರಸ್ಕರಿಸಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಸರ್ಕಾರ ಮತ್ತು ಜಿಲ್ಲಾಡಳಿತ ಸಭೆ ನಡೆಸಿದರೂ ಟೊಯೊಟೊ ಆಡಳಿತ ಮಂಡಳಿ ತನ್ನ ಮೊಂಡುತನ ಮುಂದುವೆರೆಸಿದೆ ಎಂದಿದ್ದಾರೆ.
Advertisement