ಬೆಂಗಳೂರ: ರೋಗಿ ಕುಟುಂಬಸ್ಥರಿಗೆ ಮೃತದೇಹ ನೀಡದೆ ಆಸ್ಪತ್ರೆ ತಕರಾರು: ಸಚಿವರ ಮಧ್ಯ ಪ್ರವೇಶದ ಬಳಿಕ ಹಸ್ತಾಂತರ

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಹಸ್ತಾಂತರ ವಿಷಯದಲ್ಲಿ ಕಗ್ಗಂಟಾಗಿದ್ದ ಪ್ರಕರಣ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರ ಮಧ್ಯ ಪ್ರವೇಶದಿಂದ ಬಗೆಹರಿದ ಘಟನೆ ನಡೆದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

ಬೆಂಗಳೂರ: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಹಸ್ತಾಂತರ ವಿಷಯದಲ್ಲಿ ಕಗ್ಗಂಟಾಗಿದ್ದ ಪ್ರಕರಣ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರ ಮಧ್ಯ ಪ್ರವೇಶದಿಂದ ಬಗೆಹರಿದ ಘಟನೆ ನಡೆದಿದೆ.

ರಾಜಸ್ಥಾನ ಮೂಲದ ಭೀಮರಾಮ್‌ ಪಟೇಲ್‌ ಎಂಬ ಅರವತ್ತೆರಡು ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಹೆಚ್ಚುವರಿ ಬಿಲ್‌ ಪಾವತಿ ವಿಷಯದಲ್ಲಿ ಕುಟುಂಬ ಸದಸ್ಯರು ಮತ್ತು ಜಯನಗರದಲ್ಲಿರುವ ಮಣಿಪಾಲ್‌ ಆಸ್ಪತ್ರೆ ಆಡಳಿತದ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಮಾತ್ರವಲ್ಲ, ನಲವತ್ತು ದಿನಗಳ ಚಿಕಿತ್ಸೆ ಪಡೆದರೂ ಕೊರೋನಾ ಸೋಂಕು ನಿವಾರಣೆ ಆಗಲಿಲ್ಲ, ಆದರೂ ದೊಡ್ಡ ಮೊತ್ತದ ಶುಲ್ಕ ಪಡೆದಿದ್ದಾರೆ ಮತ್ತು ಸೋಂಕು ನಿವಾರಣೆ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿತ್ತು. ಮರಣೋತ್ತರ ವರದಿಯಲ್ಲಿ ಸೋಂಕು ಇದೆ ಎಂದು ಉಲ್ಲೇಖಿಸಲಾಗಿದೆ. ನಲವತ್ತು ದಿನಗಳ ಚಿಕಿತ್ಸೆ ಬಳಿಕವೂ ಸೋಂಕು ಇದೆ ಎಂದರೆ ಹೇಗೆ? ಎಂಬುದು ಕುಟುಂಬಸ್ಥರ ಆರೋಪವಾಗಿತ್ತು. 

ಈ ಕಾರಣಗಳಿಂದ ಡಿ. ೨೩ರಂದು ರೋಗಿ ಬೆಳಗ್ಗೆ ಮೃತಪಟ್ಟಿದ್ದರೂ ಸಂಜೆ ಆದರೂ ಈ ವಿಷಯದಲ್ಲಿ ಪರ-ವಿರೋಧ ಚರ್ಚೆಗಳಿಂದ ಮೃತದೇಹ ಹಸ್ತಾಂತರ ಆಗಿರಲಿಲ್ಲ. ಈ ಮಾಹಿತಿ ಪಡೆದ ಆರೋಗ್ಯ ಸಚಿವರು ಆಸ್ಪತ್ರೆ ಹಾಗೂ ರೋಗಿ ಕುಟಂಬಸ್ಥರಿಂದ ಮಾಹಿತಿ ಪಡೆದು ಆಡಳಿತ ಮಂಡಳಿಯವರನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ವಿಚಾರಿಸಿದ್ದಾರೆ. ಆಸ್ಪತ್ರೆ ಆಡಳಿತ, ತಮ್ಮದೇನೂ ತಪ್ಪಿಲ್ಲ. ರೋಗಿಗೆ ಕೋವಿಡ್‌ ಇರುವುದರಿಂದ ನಿಯಮಾವಳಿಗಳ ಅನ್ವಯ ಬಿಬಿಎಂಪಿ ಮೂಲಕ ದೇಹ ಹಸ್ತಾಂತರ ಮಾಡಬೇಕಿದೆ ಎಂಬ ಮಾಹಿತಿ ನೀಡಿದರು. ಬಾಕಿ ಇರುವ ಶುಲ್ಕ ಪಾವತಿ ಕುರಿತ ವಿವರ ನೀಡಿದರು. ಅಂತಿಮವಾಗಿ ಸಚಿವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಇನ್ಷೂರೆನ್ಸ್‌ ಕಂಪನಿಯಿಂದ ಪಡೆದ ಹಣ ಮತ್ತು ರೋಗಿ ಪುತ್ರ ಪಟೇಲ್‌ ಮುಂಚಿತವಾಗಿ ಕಟ್ಟಿದ್ದ ಹಣಕ್ಕೆ ಬಿಲ್‌ ಮುಕ್ತಾಯಗೊಳಿಸಿ ದೇಹವನ್ನು ಮೃತರ ಕುಟುಂಬಸ್ಥರಿಗೆ ಡಿ. ೨೪ರಂದು ಕೋವಿಡಿ ವಿಧಿ ವಿಧಾನಗಳ ಅನ್ವಯ ಹಸ್ತಾಂತರಿಸಲಾಯಿತು. ಕಟ್ಟಬೇಕು ಎಂದು ತಿಳಿಸಿದ್ದ ಹತ್ತು ಲಕ್ಷದಷ್ಟು ಹಣವನ್ನು ಮನ್ನಾ ಮಾಡಲಾಯಿತು.

ನ. ೧೫ರಂದೇ ಭೀಮರಾವ್‌ ಪಟೇಲ್‌ ಅವರನ್ನು ಗ್ಯಾಸ್ಟ್ರಿಕ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂರು ದಿನಗಳ ಬಳಿಕ ಅವರಿಗೆ ಕೊರೋನಾ ಸೋಂಕು ಇದೆ ಎಂದು ತಿಳಿಸಲಾಯಿತು. ಅಂದಿನಿಂದ ೨೦ನೇ ತಾರೀಖಿನವರೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರನ್ನು ನೋಡಲು ಬಿಟ್ಟಿರಲಿಲ್ಲ. ಆ ಮಧ್ಯೆ ವಿಮಾ ಕಂಪನಿಯಿಂದ ೩೬.೫೯ ಲಕ್ಷ ಮತ್ತು ನಗದು ರೂಪದಲ್ಲಿ ೯. ೮೦ ಲಕ್ಷ ಪಾವತಿಸಲಾಗಿತ್ತು. ಸಾಯುವ ಹಿಂದಿನ ದಿನ ನೋಡಲೇ ಬೇಕು ಎಂದು ಒತ್ತಾಯಿಸಿದಾಗ ನಮ್ಮ ಕಡೆಯ ೨೦ ಮಂದಿ ಭೇಟಿಗೆ ಅವಕಾಶ ನೀಡಲಾಗಿತ್ತು. ರೋಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮರುದಿನ ಬೆಳಗ್ಗೆ ಮೃತ ಪಟ್ಟಿರುವುದಾಗಿ ಹೇಳಿ ಮತ್ತೆ ಹತ್ತು ಲಕ್ಷ ರೂ. ಬಾಕಿ ಕಟ್ಟುವಂತೆ ಒತ್ತಾಯಿಸ ಲಾಗಿತ್ತು. ಸಚಿವರ ಮಧ್ಯ ಪ್ರವೇಶದ ಬಳಿಕವಷ್ಟೇ ನಮಗೆ ದೇಹ ನೀಡಲಾಗಿದೆ ಎಂಬುದು ಕುಟುಂಬ ಸದಸ್ಯರ ದೂರಿದ್ದಾರೆ.

ರೋಗಿ ಕುಟುಂಬಸ್ಥರ ಆರೋಪಗಳನ್ನು ನಿರಾಕರಿಸಿದ್ದ ಆಸ್ಪತ್ರೆ ಆಡಳಿತ ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು. ಹೆಚ್ಚುವರಿ ಶುಲ್ಕ ಕೇಳಿಲ್ಲ, ನಿಯಮಗಳ ಅನ್ವಯವೇ ದೇಹ ನೀಡಬೇಕಿದ್ದರಿಂದ ಆ ಪ್ರಕ್ರಿಯೆ ನಡೆಸಿ ಹಸ್ತಾಂತರಿಸಲಾಗಿದೆ ಎಂದು ತಿಳಿಸಿತ್ತು.

ಕೊರೋನಾದ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸುಲಿಗೆ ಮಾಡುವುದನ್ನು ಇನ್ನು ನಿಲ್ಲಿಸಿಲ್ಲ ಎಷ್ಟೋ ಪ್ರಕರಣಗಳು ಮಾಧ್ಯಮಗಳಿಗೆ, ಇನ್ನು ಕೆಲವು ಗಲಾಟೆಯಿಂದ ಸರ್ಕಾರದ ಗಮನಕ್ಕೆ ಬರುತ್ತವೆ. ಇಲ್ಲದಿದ್ದಲ್ಲಿ ಅದೆಷ್ಟೋ ಜನರಿಗೆ ಆಸ್ಪತ್ರೆಗಳಿಂದ ಕಿರುಕುಳ ಅನುಭವಿಸಿದ್ದಾರೆ. ಇಷ್ಟಾದರೂ ಸಚಿವರು ಮಾತ್ರ ಎಲ್ಲವೂ ಸರಿ ಇದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com