ಬೆಂಗಳೂರು: ಈ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗ ಇರುವುದರಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಇನ್ನೆರಡು ದಿನಗಳಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೊರಡಿಸುವ ಸಾಧ್ಯತೆಯಿದೆ.
ಸರ್ಕಾರದ ಕಡೆಯಿಂದ ಯಾವ ನಿಯಮ ಹೊರಡಿಕೆಯಾಗಲಿದೆ ಎಂದು ನಗರ ಪೊಲೀಸರು ಡಿಸೆಂಬರ್ 31ರವರೆಗೆ ಕಾಯಲಿದ್ದಾರೆ.
ನೈಟ್ ಕರ್ಫ್ಯೂ ಬಗ್ಗೆ ಎರಡು ಮೂರು ಬಾರಿ ಸರ್ಕಾರ ನಿಯಮ ಬದಲಿಸಿ ಇತ್ತೀಚೆಗೆ ತೀವ್ರ ಮುಜುಗರಕ್ಕೀಡಾಗಿತ್ತು.ನೈಟ್ ಕರ್ಫ್ಯೂ ಜಾರಿ ಬಗ್ಗೆ ಪೊಲೀಸರು ಹಲವು ಸುತ್ತಿನ ಮಾತುಕತೆ ನಡೆಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 144ರಡಿಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಸರ್ಕಾರ ನೈಟ್ ಕರ್ಫ್ಯೂವನ್ನು ಹಿಂತೆಗೆದುಕೊಂಡು ಪೊಲೀಸ್ ಇಲಾಖೆಗೆ ತೀವ್ರ ಮುಜುಗರವನ್ನುಂಟುಮಾಡಿತ್ತು.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಭಾನುವಾರದ ಹೊತ್ತಿಗೆ ಹೊಸ ವರ್ಷಾಚರಣೆಗೆ ಸಂಬಂಧಪಟ್ಟಂತೆ ನಗರ ಪೊಲೀಸ್ ಆಯುಕ್ತರು ಮಾರ್ಗಸೂಚಿ ಹೊರಡಿಸಲಿದ್ದು ಪೊಲೀಸರು ತಮ್ಮ ವ್ಯಾಪ್ತಿಗೆ ಬರುವ ವಿಶೇಷ ರಸ್ತೆಗಳು ಮತ್ತು ಸ್ಥಳಗಳಲ್ಲಿ ಹೆಚ್ಚಿನ ನಿಷೇಧ ಹೇರಲು ಅಧಿಕಾರ ನೀಡಲಾಗಿದೆ ಎಂದಿದ್ದಾರೆ.
ನೈಟ್ ಕರ್ಫ್ಯೂ ಬಗ್ಗೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ನಗರದಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಲು ಪೊಲೀಸರು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಉನ್ನತ ಪೊಲೀಸರು ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳಿವೆ.
Advertisement