ವಲಸಿಗರ ಸಮೀಕ್ಷೆಗೆ ಮುಂದಾದ ರಾಜ್ಯ ಸರ್ಕಾರ: ಸಾಮಾಜಿಕ ಭದ್ರತೆ ನೀಡಲು ಯೋಜನೆ

ಕೋವಿಡ್-19 ನಿಂದಾಗಿ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ಹಿಂತಿರುಗಿರುವವರ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. 
ವಲಸಿಗರ ಸಮೀಕ್ಷೆಗೆ ಮುಂದಾದ ಸರ್ಕಾರ: ಸಾಮಾಜಿಕ ಭದ್ರತೆ ನೀಡಲು ಯೋಜನೆ
ವಲಸಿಗರ ಸಮೀಕ್ಷೆಗೆ ಮುಂದಾದ ಸರ್ಕಾರ: ಸಾಮಾಜಿಕ ಭದ್ರತೆ ನೀಡಲು ಯೋಜನೆ

ಬೆಂಗಳೂರು: ಕೋವಿಡ್-19 ನಿಂದಾಗಿ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ಹಿಂತಿರುಗಿರುವವರ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. 

ನಗರ ಪ್ರದೇಶಗಳನ್ನು ಬಿಟ್ಟು ವಾಪಸ್ ತಮ್ಮ ಊರು/ ಗ್ರಾಮಗಳಿಗೆ ಬಂದಿರುವವರಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಇವರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವುದು ಸರ್ಕಾರದ ಈ ಸಮೀಕ್ಷೆಯ ಹಿಂದಿನ ಉದ್ದೇಶವಾಗಿದ್ದು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಈ ಸಮೀಕ್ಷೆ, ಯೋಜನೆಯ ಪೂರ್ಣಗೊಳಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಈ ಸಮೀಕ್ಷೆ ಒಂದು ತಿಂಗಳ ಹಿಂದೆಯೇ ನಡೆಯಬೇಕಿತ್ತು. ಆದರೆ ಗ್ರಾಮ ಪಂಚಾಯ್ತಿ ಚುನಾವಣೆಯ ನೀತಿ ಸಂಹಿತಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ವಿಳಂಬವಾಯಿತು. ಈಗ ಇಲಾಖೆಯ ಅಧಿಕಾರಿಗಳು ವಲಸೆ ಹೋಗಿ ವಾಪಸ್ಸಾಗಿರುವ ಮಂದಿಯ ಹೆಸರು, ವಿಳಾಸ, ನಗರ ಪ್ರದೇಶಗಳಲ್ಲಿ ಮಾಡುತ್ತಿದ್ದ ನೌಕರಿ, ಈಗ ಉದ್ಯೋಗ ಮಾಡುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ವಿಸ್ತೃತ ಮಾಹಿತಿ ಕಲೆಹಾಕಲಿದ್ದಾರೆ. 

ಈಗ ಸರ್ಕಾರದ ಬಳಿ ಇರುವ ಮಾಹಿತಿ, ಅಂಕಿ-ಅಂಶಗಳ ಪ್ರಕಾರ ಮೇ ತಿಂಗಳ ವರೆಗೆ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ 3.5 ಲಕ್ಷ ಜನರು ವಾಪಸ್ಸಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎನ್ನುತ್ತಿದ್ದಾರೆ ಅಧಿಕಾರಿಗಳು.

ವಲಸಿಗರ ಸಮೀಕ್ಷೆಗೆ ಸಹಕಾರಿಯಾಗಲಿದೆ ಆ್ಯಪ್‌

ಈ ಸಮೀಕ್ಷೆ ವಲಸಿಗರ ಆರೋಗ್ಯ, ಆರ್ಥಿಕ , ಸಾಮಾಜಿಕ ಸ್ಥಿತಿಗಳ ಬಗ್ಗೆಯೂ ಮಾಹಿತಿ ಕಲೆಹಾಕಲಿದ್ದು, ಅವರ ಅಗತ್ಯತೆಗಳನ್ನು ಗುರುತಿಸುವುದಕ್ಕೆ ಸಹಕಾರಿಯಾಗಲಿದ್ದು, ಸರ್ಕಾರದ  ವಿವಿಧ ಯೋಜನೆಗಳ ಮೂಲಕ ಪರಿಹಾರ ಒದಗಿಸುವುದಕ್ಕೂ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಕರ್ನಾಟಕ ವಲಸಿಗರ ಟ್ರ್ಯಾಕಿಂಗ್ ಮತ್ತು ಸಾಮಾಜಿಕ ಸಂರಕ್ಷಣಾ ಚೌಕಟ್ಟು (‘Karnataka Migrants Tracking & Social Protection Framework’)  ಎಂಬ ಆ್ಯಪ್‌ ನ್ನು ಅಭಿವೃದ್ಧಿಪಡಿಸಲಾಗಿದ್ದು, ಗ್ರಾಮೀಣಾಭಿವೃದ್ಧಿ ಸಿಬ್ಬಂದಿಗಳಿಗೆ ಮೊಬೈಲ್ ಆ್ಯಪ್‌ ಗೆ ವಿವರಗಳನ್ನು ಫೀಡ್ ಮಾಡುವ ಕೆಲಸವನ್ನು ವಹಿಸಲಾಗಿದೆ. ಈ ಸಮೀಕ್ಷೆ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪಂಚಾಯತ್ ರಾಜ್ ನ ಆಯುಕ್ತ ಪ್ರಿಯಾಂಕ ಮೇರಿ ಫ್ರಾನ್ಸಿಸ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com