ದೇವಸ್ಥಾನ ಅರ್ಚಕರಿಗೆ ಸಂಸ್ಕೃತ, ವೇದ, ಆಗಮ ಶಾಸ್ತ್ರಗಳ ಅಧ್ಯಯನ: ಮುಜರಾಯಿ ಇಲಾಖೆಯಿಂದ ಪ್ರಸ್ತಾವನೆ

ರಾಜ್ಯದ ಪ್ರಮುಖ ದೇವಾಲಯಗಳ ಅರ್ಚಕರಿಗೆ ಇನ್ನಷ್ಟು ಸಂಸ್ಕೃತ ಮತ್ತು ವೇದಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರದ ವತಿಯಿಂದ ಅರ್ಚಕರಿಗೆ ವೇದ ಮತ್ತು ಸಂಸ್ಕೃತಗಳ ದೀರ್ಘಾವಧಿ ಮತ್ತು ಅಲ್ಪಾವಧಿಯ ಕೋರ್ಸ್ ಗಳನ್ನು ಆರಂಭಿಸಲಾಗುತ್ತದೆ.
ದೇವಸ್ಥಾನ ಅರ್ಚಕರಿಗೆ ಸಂಸ್ಕೃತ, ವೇದ, ಆಗಮ ಶಾಸ್ತ್ರಗಳ ಅಧ್ಯಯನ: ಮುಜರಾಯಿ ಇಲಾಖೆಯಿಂದ ಪ್ರಸ್ತಾವನೆ

ಬೆಂಗಳೂರು: ರಾಜ್ಯದ ಪ್ರಮುಖ ದೇವಾಲಯಗಳ ಅರ್ಚಕರಿಗೆ ಇನ್ನಷ್ಟು ಸಂಸ್ಕೃತ ಮತ್ತು ವೇದಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರದ ವತಿಯಿಂದ ಅರ್ಚಕರಿಗೆ ವೇದ ಮತ್ತು ಸಂಸ್ಕೃತಗಳ ದೀರ್ಘಾವಧಿ ಮತ್ತು ಅಲ್ಪಾವಧಿಯ ಕೋರ್ಸ್ ಗಳನ್ನು ಆರಂಭಿಸಲಾಗುತ್ತದೆ.


ಮುಜರಾಯಿ ಇಲಾಖೆ ಈ ಕುರಿತ ಪ್ರಸ್ತಾವನೆಯನ್ನು ತಂದಿದ್ದು ಇದರ ಸಾಧ್ಯತೆ ಬಗ್ಗೆ ತಿಳಿದುಕೊಳ್ಳಲು ಸಮಿತಿಯೊಂದನ್ನು ರಚಿಸಲಾಗಿದೆ.


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಭಟ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿ ದೇವಾಲಯದ ಆವರಣಗಳಲ್ಲಿ ಸಂಸ್ಕೃತ, ವೇದ ಮತ್ತು ಆಗಮ ಶಾಸ್ತ್ರಗಳ ಅಧ್ಯಯನಕ್ಕೆ ಇರುವ ಅನುಕೂಲತೆ ಮತ್ತು ಅನನುಕೂಲತೆಗಳ ಬಗ್ಗೆ ಅಧ್ಯಯನ ನಡೆಸಲಿದೆ. ಇದರಿಂದ ಈಗಾಗಲೇ ಅರ್ಚಕರಾಗಿ ಕೆಲಸ ಮಾಡುತ್ತಿರುವ ಮತ್ತು ಅರ್ಚಕರಾಗಲು ಬಯಸುವವರಿಗೆ ಸಹಾಯವಾಗಲಿದೆ ಎಂದರು.


ರಾಜ್ಯದಲ್ಲಿರುವ ಹಲವು ಸಂಸ್ಕೃತ ಶಾಲೆ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿರುವುದಿಲ್ಲ. ಹೀಗಾಗಿ ಉತ್ತಮ ಸೌಕರ್ಯಗಳಿರುವ ದೇವಾಲಯಗಳ ಆವರಣಗಳಲ್ಲಿ ಸಂಸ್ಕೃತ, ವೇದಗಳನ್ನು ಕಲಿಸಿದರೆ ಅಗತ್ಯವಿರುವವರಿಗೆ ಕಲಿಯಲು ಅನುಕೂಲವಾಗುತ್ತದೆ ಎಂದರು.


ವೇದ ಮತ್ತು ಆಗಮ ಶಾಸ್ತ್ರಗಳಲ್ಲಿ ಒಂದು ವರ್ಷದ ವಿಶೇಷ ಕೋರ್ಸ್ ಗಳನ್ನು ಕಲಿಸಲು ಸಾಧ್ಯವಿದೆಯೇ ಎಂದು ಸಹ ಸಮಿತಿ ಅಧ್ಯಯನ ನಡೆಸಲಿದೆ. ಯುವ ಜನತೆಗೆ ಇದರಿಂದ ಕೌಶಲ್ಯ ವೃದ್ದಿಯಾಗುತ್ತದೆ. ಹಲವು ದೇವಾಲಯಗಳ ಹಿರಿಯ ಅರ್ಚಕರು ಯುವ ಆಕಾಂಕ್ಷಿಗಳಿಗೆ, ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಿದ್ದಾರೆ.


ಅಲ್ಲದೆ ದೇವಸ್ಥಾನಕ್ಕೆ ಸೇರುವ ಕೆರೆ, ಕಲ್ಯಾಣಿ, ಸರೋವರಗಳ ಪುನರುಜ್ಜೀವನಕ್ಕೆ ಜಲಾಭಿಷೇಕ ಯೋಜನೆಯಡಿ ಸ್ಥಳೀಯರು ಮತ್ತು ಖಾಸಗಿ ಸಂಘಟನೆಗಳ ನೆರವನ್ನು ಸಹ ಮುಜರಾಯಿ ಇಲಾಖೆ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com