ಹೊಸಪೇಟೆ: ಬೆನ್ಜ್ ಕಾರು ಅಪಘಾತ ಪ್ರಕರಣದಲ್ಲಿ ಮೃತನಾದ ರವಿನಾಯ್ಕ್ ಕುಟುಂಬಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಸಾಂತ್ವಾನ ಹೇಳಿದ್ದಾರೆ
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡದಲ್ಲಿರುವ ಮೃತ ರವಿನಾಯ್ಕ್ ಮನೆಗೆ ಇಂದು ಭೇಟಿ ನೀಡಿದ ಶಾಸಕ ಘಟನೆ ಬಗ್ಗೆ ಮಾಹಿತಿ ಕೇಳಿದರು. ಮೃತರ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡಿದ ಶಾಸಕರು, ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಾನಾಯ್ಕ್, ಗೃಹಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪ್ರಕರಣದ ತನಿಖೆಯನ್ನ ನಿಷ್ಪಕ್ಷಪಾತ ವಾಗಿ ತನಿಖೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದರು.
ಮರಿಯಮ್ಮನ ಹಳ್ಳಿ ಪೊಲೀಸರು ಒತ್ತಡದಿಂದ ಪ್ರಕರಣ ಮುಚ್ಚಿಹಾಕೋ ಪ್ರಯತ್ನ ಮಾಡ್ತಿದ್ದಾರೆ.ಪ್ರಾಮಾಣಿಕ ತನಿಖೆ ಯಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ , ಗೃಹ ಸಚಿವ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವೆ ಎಂದು ತಿಳಿಸಿದರು.
ಸಚಿವ ಆರ್. ಆಶೋಕ ಮಗ ಇದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ಕಾರಿನಲ್ಲಿ ಇದ್ದವರು ಐದು ಐದು ಜನರೋ ಅಥವಾ ನಾಲ್ಕು ಜನರೋ ಅನ್ನೋ ಬಗ್ಗೆ ಹತ್ತು ಹಲವು ಅನುಮಾನಗಳಿವೆ.ಆಶೋಕ ಅವರ ಮಗ ಇದ್ದಾರೆ ಇಲ್ವೇ ಅನ್ನೋದು ಗೊತ್ತಾಗಬೇಕಂದ್ರೆ ಕಾರಿನಲ್ಲಿ ಇದ್ದವರನ್ನು ಬಂಧಿಸಬೇಕು.ಆಗ ನಿಜವಾದ ಆರೋಪಿಗಳು ಯಾರು ಎನ್ನುವುದು ಗೊತ್ತಾಗುತ್ತದೆ ಎಂದರು.
ಆಸ್ಪತ್ರೆಗೆ ಹೋಗಿದ್ದಾಗ ಎಷ್ಟು ಜನ ಇದ್ರೂ, ಪೊಲೀಸರೇಕೆ ವೈದ್ಯರ ಮೇಲೆ ಒತ್ತಡ ಹಾಕಿದರು, ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರೇಕೆ ಒತ್ತಡ ಹಾಕಿದರು ಎಂಬುದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಯಬೇಕೆಂದು ಭೀಮಾನಾಯ್ಕ್ ಒತ್ತಾಯಿಸಿದರು.
ಇದೇ ತಿಂಗಳ 10 ರಂದು ಮಧ್ಯಾಹ್ನ 2-30ರ ಸುಮಾರಿನಲ್ಲಿ ಮರಿಯಮ್ಮನಹಳ್ಳಿಯ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ಸಚಿವ ಆರ್ . ಅಶೋಕ್ ಪುತ್ರನದ್ದು ಎನ್ನಲಾದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ರವಿನಾಯ್ಕ್ ಎಂಬ ಯುವಕನಿಗೆ ಗುದ್ದಿ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ.
Advertisement