ಫರ್ನೀಚರ್ ಗೋದಾಮಿಗೆ ಬೆಂಕಿ: ಕಾರ್ಮಿಕರು ಪ್ರಾಣಾಪಾಯದಿಂದ ಪಾರು
ಬೆಂಗಳೂರು: ಫರ್ನೀಚರ್ ತುಂಬಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಗೋದಾಮು ಏಕಾಏಕೀ ಹೊತ್ತಿ ಉರಿದಿರುವ ಘಟನೆ ಇಲ್ಲಿನ ಹೆಗಡೆ ನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ದಾಮೋದರ್ ಎಂಬುವವರಿಗೆ ಸೇರಿದ ಶ್ರೀರಂಗ ಫರ್ನೀಚರ್ಸ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, 12 ಮಂದಿ ಕೆಲಸಗಾರರು ಗೋದಾಮಿನಲ್ಲಿ ಮಲಗಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ರಾತ್ರಿ ಸುಮಾರು 2 ಗಂಟೆ ವೇಳೆಗೆ ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಕಾರ್ಮಿಕರು ಕೂಡಲೇ ಗೋದಾಮಿನಿಂದ ಹೊರಬಂದಿದ್ಧಾರೆ ಎನ್ನಲಾಗಿದೆ. ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಗೋದಾಮಿನ ಮಾಲೀಕ ಕಬೀರ್ ಮಾತನಾಡಿ, 'ಗೋದಾಮಿಗೆ ಬೆಂಕಿ ಬಿದ್ದಿದೆ ಅಂತ ನಮ್ಮ ಹುಡುಗರು ಕರೆ ಮಾಡಿ ಹೇಳಿದರು. ಕೂಡಲೇ ನಾನು ಸ್ಥಳಕ್ಕೆ ಬಂದೆ. ಯಾರೋ ಕಸಕ್ಕೆ ಬೆಂಕಿ ಹಾಕಿದ್ದಾರೆ. ಇದರಿಂದಲೇ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ. ಗೋದಾಮಿನ ಖಾಲಿ ಜಾಗದಲ್ಲಿ ಚಿಕ್ಕ ಹುಡುಗರು ಬಂದು ಗಾಂಜಾ, ಸಿಗರೇಟ್ ಸೇದುತ್ತಾರೆ. ಇದರಿಂದಲೇ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಸುಮಾರು 2 ಲಕ್ಷ ಮೌಲ್ಯದ ಫರ್ನಿಚರ್ ಸುಟ್ಟು ಹೋಗಿವೆ' ಎಂದು ಹೇಳಿದರು.