ಪ್ರಶ್ನೆ ಪತ್ರಿಕೆ ವದಂತಿಕೋರರ ವಿರುದ್ಧ ಕಠಿಣ ಕ್ರಮ: ಸಚಿವ ಸುರೇಶ್ ಕುಮಾರ್

ಪಿಯುಸಿ ಮತ್ತು ಎಸ್‍ಎಸ್‍ಎಲ್ ಸಿ ಪರೀಕ್ಷೆಗಳ ಕುರಿತು ಸುಳ್ಳು ಮಾಹಿತಿ ಹಬ್ಬಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸುರೇಶ್ ಕುಮಾರ್ ವಿಡಿಯೋ ಸಂವಾದ
ಸುರೇಶ್ ಕುಮಾರ್ ವಿಡಿಯೋ ಸಂವಾದ

ಬೆಂಗಳೂರು: ಪಿಯುಸಿ ಮತ್ತು ಎಸ್‍ಎಸ್‍ಎಲ್ ಸಿ ಪರೀಕ್ಷೆಗಳ ಕುರಿತು ಸುಳ್ಳು ಮಾಹಿತಿ ಹಬ್ಬಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಎಸ್‍ಎಸ್‍ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳ ಸಿದ್ಧತೆ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೆೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಮತ್ತು ಉಪವಿಭಾಗಗಳ ಖಜಾನಾಧಿಕಾರಿಗಳು ಮತ್ತು ಪಿಯು ಉಪನಿರ್ದೇಶಕ ರೊಂದಿಗೆ ವಿಡಿಯೋ ಸಂವಾದ ನಡೆಸಿದ ಸಚಿವರು, ಪರೀಕ್ಷೆಗಳು ಸುಗಮವಾಗಿ ಯಾವುದೇ ಗೊಂದಲವಿಲ್ಲದೇ ನಡೆಯುವ ಕುರಿತು ಸೂಚನೆಗಳನ್ನು ನೀಡಿದರು. ವಿಡಿಯೋ ಸಂವಾದದಲ್ಲಿ ಪದವಿಪೂರ್ವ ಇಲಾಖೆ ನಿರ್ದೇಶಕಿ ಸಿ. ಕನಗವಲ್ಲಿ, ಖಜಾನೆ ಇಲಾಖೆ ಆಯುಕ್ತ ಉಜ್ವಲï ಕುಮಾರ್ ಘೋಷ್ ಮತ್ತಿತರರ ಅಧಿಕಾರಿಗಳು ಭಾಗವಹಿಸಿದ್ದರು.

ಅಂತೆಯೇ ಮುಂದಿನ ತಿಂಗಳು ನಡೆಯಲಿರುವ ಪಿಯುಸಿ ಮತ್ತು ಎಸ್‍ಎಸ್‍ಎಲ್ ಸಿ ಪರೀಕ್ಷೆಗಳಲ್ಲಿ ಯಾವುದೋ ಪ್ರಶ್ನೆ ಪತ್ರಿಕೆಯನ್ನು ಈ ವರ್ಷದ್ದೆಂದು ನಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಗೊಂದಲ ಮೂಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು. 

'ಸಾಮಾಜಿಕ ಜಾಲತಾಣಗಳ ಮೂಲಕ ಗೊಂದಲ ಮೂಡಿಸುವವರ ಕುರಿತು ಸೂಕ್ತ ಕ್ರಮಕೈಗೊಳ್ಳುವ ಕುರಿತಂತೆ ಜಿಲ್ಲಾಧಿಕಾರಿಗಳು ಮತ್ತು ಪೆೊಲೀಸ್ ಅಧಿಕಾರಿಗಳು ತಮ್ಮ ಹಂತದಲ್ಲಿ ಸುತ್ತೋಲೆ ಹೊರಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಶ್ನೆ ಪತ್ರಿಕೆ ರವಾನೆ, ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿ, ಪ್ರಶ್ನೆ ಪತ್ರಿಕೆ ರವಾನೆ ವಾಹನಗಳನ್ನು ರಾಜ್ಯದ ಯಾವುದೇ ವಾಹನ ತಪಾಸಣಾ ಕೇಂದ್ರಗಳಲ್ಲಿ ಯಾವುದೇ ರೀತಿಯಲ್ಲೂ ತಪಾಸಣೆ ಮಾಡದಂತೆ ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಹಾಗೆಯೇ ಆಯಾ ಜಿಲ್ಲೆಗಳಲ್ಲೂ ಅದನ್ನು ಖಚಿತಪಡಿಸಲು ಸಂಬಂಧಿಸಿದವರಿಗೆ ಡಿಸಿ ಮತ್ತು ಎಸ್ಪಿಗಳು ಮಾರ್ಗದರ್ಶನ ನೀಡಬೇಕೆಂದು ಸೂಚಿಸಿದರು.

ಅಷ್ಟು ಮಾತ್ರವಲ್ಲದೇ 'ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಮತ್ತು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲು ಸೂಚಿಸಲಾದ ನಿಗದಿತ ಮಾರ್ಗಗಳ್ಲಲ್ಲಿಯೇ ರೂಟ್ ವಾಹನಗಳು ಸಾಗಬೇಕು ಹಾಗೆಯೇ ಪರೀಕ್ಷಾ ಸಾಮಗ್ರಿಗಳು ಪರೀಕ್ಷಾ ಸಮಯಕ್ಕೂ ಮೊದಲೇ ದೊರೆಯುವಂತೆ ಖಚಿತಪಡಿಸಿಕೊಳ್ಳುವುದು ಜಿಲ್ಲಾಡಳಿತ ಮತ್ತು ಅಪರ ಜಿಲ್ಲಾಧಿಕಾರಿ ನೇತೃತ್ವದ ಪರೀಕ್ಷಾ ಪ್ರಶ್ನೆ ಪತ್ರಿಕೆ ಪಾಲನಾ ತಂಡದ ಜವಾಬ್ದಾರಿಯಾಗಿದ್ದು, ಅದನ್ನು ಯಾವುದೇ ವ್ಯತ್ಯಯಕ್ಕೆ ಅವಕಾಶವಿಲ್ಲದಂತೆ ಮಾಡಬೇಕಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವುದು ಹಾಗೂ ಸ್ವಚ್ಛ ಶೈಕ್ಷಣಿಕ ಹಿನ್ನೆಲೆಯಳ್ಳವರನ್ನು ಮಾತ್ರವೇ ನೇಮಿಸುವುದು ಸೇರಿದಂತೆ ನಿಯೋಜಿತ ಸಿಬ್ಬಂದಿಯ ಪೂರ್ವಾಪರಗಳನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು. ಹಿಂದಿನ ಪರೀಕ್ಷೆಗಳಲ್ಲಿ ಗೊಂದಲ ಮೂಡಿಸಿದ ಖಜಾನೆಗಳು, ಪರೀಕ್ಷಾ ಕೇಂದ್ರಗಳು ಮತ್ತುಅದಕ್ಕೆ ಕಾರಣರಾದ ಸಿಬ್ಬಂದಿ ಹಾಗೆಯೇ ಇಂತಹ ಯಾವುದೇ ರೀತಿಯ ಗೊಂದಲ ಮೂಡಿಸಬಹುದಾದ ವ್ಯಕ್ತಿಗಳ ಕುರಿತು ಹೆಚ್ಚಿನ ನಿಗಾವಹಿಸಬೇಕು ಎಂದು ಸಚಿವರು ತಿಳಿಸಿದರು.

ವಿಕಲಚೇತನರಿಗೆ ಅಗತ್ಯ ನೆರವು
ಇನ್ನು ವಿಕಲಚೇತನರಿಗೆ ಪರೀಕ್ಷೆ ಬರೆಯಲು ಒದಗಿಸುವ ಸಹಾಯಕರನ್ನು ಒದಗಿಸುವ ಕುರಿತು ಸ್ಪಷ್ಪ ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಲಾಗಿದ್ದು, ಆ ಪ್ರಕಾರವೇ ಸಹಾಯಕರನ್ನು ಒದಗಿಸಬೇಕು. ಪರೀಕ್ಷಾರ್ಥಿ ಪರೀಕ್ಷೆಯ ಕೊನೆ ಬೆಲ್ ಬಾರಿಸುವ ಮೊದಲು ಯಾವುದೆೇ ಸಮಯದಲ್ಲಿ ಹೋಗುವುದಾದರೆ ಅವರಿಂದ ಪ್ರಶ್ನೆ ಪತ್ರಿಕೆಯನ್ನೂ ಪಡೆದುಕೊಂಡು ಅವರನ್ನು ಹೊರಗೆ ಕಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರ, ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಮಾಡಬೇಕಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು ಸೇರಿದಂತೆ ಸುಲಲಿತ ಪರೀಕ್ಷೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದ ಸಚಿವರು ಮಕ್ಕಳ ನೈತಿಕತೆ ಕುಂದಿಸುವ ಯಾವುದೇ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದನ್ನು ಜಿಲ್ಲಾಡಳಿತದ ಪರೀಕ್ಷಾ ತಂಡಗಳು ಖಚಿತಪಡಿಸಿಕೊಳ್ಳಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com