ಚಾಮರಾಜನಗರ: ಎಷ್ಟೇ ಮನವಿ ಮಾಡಿದರೂ ಜಮೀನಿಗೆ ವಿದ್ಯುತ್ ಸಂಪರ್ಕ ನೀಡದಿದ್ದರಿಂದ ಬೇಸತ್ತ ರೈತನ ಕುಟುಂಬವೊಂದು ವಿಷದ ಬಾಟಲಿ ಹಿಡಿದು ಆತಂಕ ಸೃಷ್ಟಿಸಿದ ಘಟನೆ ಹನೂರಿನಲ್ಲಿ ನಡೆದಿದೆ.
ಹನೂರು ತಾಲೂಕಿನ ಬೈಲೂರು ಗ್ರಾಪಂ ವ್ಯಾಪ್ತಿಯ ಹೊಸದೊಡ್ಡಿ ಗ್ರಾಮದ ಪ್ರಭುಸ್ವಾಮಿ ಎಂಬ ರೈತ ವಿಷದ ಬಾಟಲಿಯೊಂದಿಗೆ ತನ್ನ ಇಡೀ ಕುಟುಂಬ ಕರೆತಂದು ಚೆಸ್ಕಾಂ ಕಚೇರಿ ಮುಂದೆ ತಮ್ಮ ಅಳಲು ತೋಡಿಕೊಂಡರು. ನಾಲ್ಕು ತಿಂಗಳಿಂದ ಜಮೀನಿಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ನೀರು ಹಾಯಿಸಲಾಗದೇ ಎರಡು ಎಕರೆ ಅರಿಶಿಣ ಫಸಲು ಒಣಗಿದೆ. ಚೆಸ್ಕಾಂ ಸಿಬ್ಬಂದಿಗೆ ಲಂಚ ನೀಡಿದರೂ ಸಂಪರ್ಕ ಮಾತ್ರ ಕೊಡದೇ ಸತಾಯಿಸುತ್ತಿದ್ದಾರೆ. ಸಮಸ್ಯೆಗೆ ಪರಿಹರಿಸದಿದ್ದರೇ ವಿಷ ಸೇವಿಸುವುದಾಗಿ ಪಟ್ಟು ಹಿಡಿದು ಕುಳಿತರು.ವಿಷದ ಬಾಟಲಿ ಹಿಡಿದು ಕಚೇರಿಗೆ ಬಂದ ರೈತ ಕುಟುಂಬ.
ಕೊನೆಗೆ ಸ್ಥಳಕ್ಕೆ ಆಗಮಿಸಿದ ಜ್ಯೂನಿಯರ್ ಎಂಜಿನಿಯರ್ ನೌಷಾದ್ ಪಾಷಾ, ಪಕ್ಕದ ಜಮೀನಿನ ಮಾಲೀಕರಿಗೂ ಪ್ರಭುಸ್ವಾಮಿ ಅವರ ನಡುವೆ ವ್ಯಾಜ್ಯ ಇರುವುದರಿಂದ ಸಂಪರ್ಕ ನೀಡಲು ವಿಳಂಬವಾಗಿದೆ. ನಾಳೆ ಪೊಲೀಸರ ಸಮ್ಮುಖದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತನ ಕುಟುಂಬ ಪ್ರತಿಭಟನೆ ವಾಪಸ್ ಪಡೆದು ಹಿಂದಿರುಗಿತು.
Advertisement