ರಾಮನಗರ: ಅತ್ಯಾಚಾರ ಸೇರಿದಂತೆ ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಜಾಮೀನನ್ನು ರಾಮನಗರ ಕೋರ್ಟ್ ರದ್ದು ಮಾಡಿದ್ದು, ಬಾಂಡ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಲ್ಲದೇ ಆತನ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾಧ್ಯಮವೊಂದು ವರದಿ ಮಾಡಿದ್ದು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರಾಗುತ್ತಿದ್ದ ಹಿನ್ನೆಲೆಯಲ್ಲಿ ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ರದ್ದುಗೊಳಿಸಿ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದೆ. ಅಲ್ಲದೆ ಈ ಹಿಂದೆ ನಿತ್ಯಾನಂದ ಜಾಮೀನಿಗಾಗಿ ಸಲ್ಲಿಕೆ ಮಾಡಿದ್ದ ಬಾಂಡ್ ಅನ್ನು ಕೂಡ ಕೋರ್ಟ್ ಮುಟ್ಟುಗೋಲು ಹಾಕಿಕೊಂಡಿದೆ.
ಅಲ್ಲದೇ ಪ್ರಕರಣದ ವರ್ಗಾವಣೆ ಮನವಿಯನ್ನ ರದ್ದುಗೊಳಿಸಿ ರಾಮನಗರದ ಜಿಲ್ಲಾ ನ್ಯಾಯಾಲಯದಲ್ಲೇ ವಿಚಾರಣೆ ನಡೆಸುವಂತೆ ಆದೇಶಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸುಮಾರು 36 ಕ್ಕೂ ಹೆಚ್ಚು ನ್ಯಾಯಾಲಯದ ವಿಚಾರಣೆಗೆ ನಿತ್ಯಾನಂದ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ ನಿತ್ಯಾನಂದ ವಿಚಾರಣೆಗೆ ಗೈರಾಗುತ್ತಿದ್ದು ಆತನಿಗೆ ನೀಡಿರುವ ಜಾಮೀನನ್ನ ರದ್ದುಗೊಳಿಸುವಂತೆ ಹೈಕೋರ್ಟ್ನಲ್ಲಿ ಮನವಿ ಮಾಡಲಾಗಿತ್ತು.
ಇನ್ನು ಈ ಹಿಂದಿ ಬೆಂಗಳೂರು ಹೊರವಲಯದಲ್ಲಿರುವ ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ತನ್ನ ಮಹಿಳಾ ಭಕ್ತರ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಎದುರಿಸಿದ್ದ. ಪ್ರಕರಣ ಸಂಬಂಧ ಬಂಧಿತನಾಗಿದ್ದ ಆತ ಬಳಿಕ ಜಾಮೀನು ಪಡೆದಿದ್ದ. ಅಲ್ಲದೆ ತಾನು ಆರು ವರ್ಷದ ಬಾಲಕನೆಂದು ಪುರುಷತ್ವ ಪರೀಕ್ಷೆಗೆ ಒಳಗಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಚಾಲ್ತಿಯಲ್ಲಿರುವಂತೆಯೇ ಇತ್ತ ನಿತ್ಯಾನಂದ ಇತ್ತೀಚೆಗೆ ದೇಶ ಬಿಟ್ಟು ಪರಾರಿಯಾಗಿದ್ದ. ಬಳಿಕ ಅಮೆರಿಕ ಬಳಿಯ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿ ಅದು ತನ್ನ ಹೊಸ ದೇಶ ಎಂದು ಘೋಷಣೆ ಮಾಡಿದ್ದ. ಅಲ್ಲದೆ ತನ್ನ ದೇಶಕ್ಕೆ ಹೊಸ ಪಾಸ್ ಪೋರ್ಟ್, ವೀಸಾ ಮತ್ತು ಹೊಸ ಸಂವಿಧಾನವನ್ನು ರಚಿಸಿ ಹಿಂದೂ ಭಕ್ತರಿಗೆ ಸ್ವಾಗತ ಎಂದು ಹೇಳಿದ್ದ.
Advertisement