ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕಾಂಗ್ರೆಸ್, ಜೆಡಿಎಸ್ ಶಾಸಕರ ಅನುದಾನ ಕಡಿತ ವಿವಾದ

ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನ ಕಡಿತಗೊಳಿಸಿ, ಕಾಮಗಾರಿಗಳನ್ನು ತಡೆಹಿಡಿದಿರುವ ವಿಚಾರ ವಿಧಾನಸಭೆಯಲ್ಲಿಂದು ಗದ್ದಲಕ್ಕೆ ಕಾರಣವಾಯಿತು.   
ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್‌ ಪ್ರತಿಧ್ವನಿ: ಗದ್ದಲ, ಆಡಳಿತ-ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ
ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್‌ ಪ್ರತಿಧ್ವನಿ: ಗದ್ದಲ, ಆಡಳಿತ-ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನ ಕಡಿತಗೊಳಿಸಿ, ಕಾಮಗಾರಿಗಳನ್ನು ತಡೆಹಿಡಿದಿರುವ ವಿಚಾರ ವಿಧಾನಸಭೆಯಲ್ಲಿಂದು ಗದ್ದಲಕ್ಕೆ ಕಾರಣವಾಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು ಕಡಿತಗೊಳಿಸಲಾಗಿದೆ.  ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು. 
  
ಇದಕ್ಕೆ ಧ್ವನಿಗೂಡಿಸಿದ ಹಲವು ಶಾಸಕರು ಸದನದಲ್ಲಿ ಗದ್ದಲವೆಬ್ಬಿಸಿದರು. ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಈ ನಡುವೆ ಬಿಜೆಪಿಯ ಸಿ.ಸಿ.ಪಾಟೀಲ್ ಎದ್ದುನಿಂತು, ಕಳೆದ ಆರು ವರ್ಷಗಳಲ್ಲಿ ನಾವು ಅನುಭವಿಸಿದ್ದ ಕಷ್ಟಗಳು ಈಗ ನಿಮಗೆ ಅರಿವಾಗುತ್ತಿದೆಯೇ ಎಂದು ಕಾಂಗ್ರೆಸ್ ಶಾಸಕರನ್ನು ಮಾತಿನಿಂದ ತಿವಿದರು. 
  
ಸ್ಪೀಕರ್, ಈ ಕಾಮಗಾರಿಗಳಿಗೆ ಹಣಕಾಸು ಇಲಾಖೆಯ ಅನುಮೋದನೆ ದೊರೆತಿರಲಿಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಕಾರಜೋಳ, ಇಲ್ಲ, ಹಲವು ಯೋಜನೆಗಳು ಅನುಮೋದನೆ ಪಡೆಯದೆಯೇ ಆರಂಭಗೊಂಡಿವೆ. ಆದ್ದರಿಂದ ಅವುಗಳನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ರಸ್ತೆ ಅನುದಾನದಡಿ ಲಭ್ಯವಿರುವ ಮೊತ್ತದ ವ್ಯಾಪ್ತಿಯನ್ನೂ ಮೀರಿ 5700 ರೂ. ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಇದರಿಂದ ಗುತ್ತಿಗೆದಾರರು ವಿಷ ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. 
  
ಇದಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಹಣಕಾಸು ಇಲಾಖೆಯ ಅನುಮೋದನೆ ಪಡೆಯದೆ ಟೆಂಡರ್ ಪ್ರಕ್ರಿಯೆ ನಡೆಸಲು ಹೇಗೆ ಸಾಧ್ಯ? ರಾಜ್ಯ ಸರ್ಕಾರ ತಮ್ಮ ಶಾಸಕರಿಗೆ ನೀಡಲು ವಿಪಕ್ಷಗಳ ಅನುದಾನವನ್ನು ಕಡಿತಗೊಳಿಸಿದೆ. ಈಗ ಇಲ್ಲಸಲ್ಲದ ನೆವ ಹೇಳುತ್ತಿದೆ ಎಂದು ಆರೋಪಿಸಿದರು. 
  
ಈ ವಾದವನ್ನು ಪುಷ್ಠೀಕರಿಸಿದ ಸಿದ್ದರಾಮಯ್ಯ, ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ವೇಳೆ 500 ಕೋಟಿ ರೂ. ವೆಚ್ಚ ಮಾಡಲು ಹಣವೆಲ್ಲಿತ್ತು. ಇದ್ಯಾವ ರೀತಿಯ ಆರ್ಥಿಕ ಶಿಸ್ತು ಎಂದು ಪ್ರಶ್ನಿಸಿದರು. ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೈತ್ರಿ ಸರ್ಕಾರದ ಅವಧಿಯಲ್ಲಿ 105 ಸದಸ್ಯರಿರುವ ಬಿಜೆಪಿ 2986 ಕೋಟಿ ರೂ., 79 ಸದಸ್ಯರಿಗೆ ಕಾಂಗ್ರೆಸ್ ಗೆ 3834 ಕೋಟಿ ರೂ. ಹಾಗೂ 37 ಶಾಸಕರಿರುವ ಕಾಂಗ್ರೆಸ್ 2974 ಅನುದಾನ ನೀಡಲಾಗಿತ್ತು. ಇದು ಹಿಂದಿನ ಸರ್ಕಾರ ನೀಡಿರುವ ಅನುದಾನದಲ್ಲಿದ್ದ ತಾರತಮ್ಯ ಎಂಬ ವಿವರವನ್ನು ಸದನದ ಮುಂದಿಟ್ಟರು. 
  
ಈ ನಡುವೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ತಾವು ಸ್ಪೀಕರ್ ಆಗಿದ್ದಾಗ, ತಮ್ಮ ಕ್ಷೇತ್ರಕ್ಕೆ ನ್ಯಾಯವಾಗಿ ಸಿಗಬೇಕಾದುದನ್ನು ಪಡೆದುಕೊಳ್ಳಲಾಗಲಿಲ್ಲ. ಸದನದ ಅತ್ಯುನ್ನತ ಹುದ್ದೆಯಲ್ಲಿ ಕುಳಿತು ನನ್ನ ಕ್ಷೇತ್ರಕ್ಕೆ ಬೇಕಾದ ಸಣ್ಣ ಅನುಕೂಲತೆ ಪಡೆಯಲು ಬೇಡಬೇಕಾದ ಪರಿಸ್ಥಿತಿ ಇತ್ತು ಎಂದ ಅವರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನುದ್ದೇಶಿಸಿ, ನಿಮಗೆ ನನ್ನ ಪರಿಸ್ಥಿತಿ ಬಾರದಿರಲಿ ಎಂದರು. 
  
ಸದನದಲ್ಲಿ ಕೆಲವು ಬಾಯಿಲ್ಲದ ಶಾಸಕರಿರುತ್ತಾರೆ. ಅವರಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಅಂತಹರಿಗೆ ಸರ್ಕಾರ ನ್ಯಾಯ ಒದಗಿಸಬೇಕು. ಸಿದ್ದರಾಮಯ್ಯ, ಯಡಿಯೂರಪ್ಪನಂತಹ ನಾಯಕರು ಕೇವಲ ಪಕ್ಷಗಳಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿಗಳ ಬಳಿಗೆ ಹೋಗಲು ಅವಕಾಶ ಪಡೆದು ಮನವೊಲಿಸುವವರಿಗೆ ಮಾತ್ರ ಲಾಭ ಎಂಬ ಧೋರಣೆ ಬದಲಾಗಬೇಕು ಎಂದು ಸಲಹೆ ನೀಡಿದರು. 
  
ಇಷ್ಟಾದರೂ, ಶಾಸಕರ ಗದ್ದಲ ನಿಲ್ಲದಾಗ, ಸ್ಪೀಕರ್ ಕಾಗೇರಿ, ನಿಮ್ಮ ಸದಸ್ಯರಿಗೆ ತಿಳಿ ಹೇಳಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು. ಸಿದ್ದರಾಮಯ್ಯ ಕೂಡ ತಮ್ಮ ಸದಸ್ಯರ ಆಕ್ರೋಶವನ್ನು ತಣ್ಣಗಾಗಿಸಲು ಹರಸಾಹಸ ಪಡಬೇಕಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com