ಬೆಂಗಳೂರು: ಐಟಿ ಅಧಿಕಾರಿಗಳ ಸೋಗಿನಲ್ಲಿ ವಂಚಿಸಿ ಹಣ ಪಡೆದು ಪರಾರಿಯಾಗುತ್ತಿದ್ದ ನಕಲಿ ಐಟಿ ಅಧಿಕಾರಿಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ನಾಗೇಂದ್ರ ಎಚ್ ಎಸ್ ಬಂಧಿತ ಆರೋಪಿ. ವ್ಯಕ್ತಿಯೋರ್ವ ತಾನು ಐಟಿ ಇಲಾಖೆಯ ಜಂಟಿ ಆಯುಕ್ತ ಮಂಜುನಾಥ್ ನಾಯಕ್ ಎಂದು ಕರೆ ಮಾಡಿ, ನಿಮ್ಮ ವಿರುದ್ಧ ಅಕ್ರಮ ಸಂಪತ್ತು ಹೊಂದಿರುವುದ ಕುರಿತು ಇಲಾಖೆಗೆ ದೂರು ಬಂದಿದೆ.
ಈ ಹಿನ್ನೆಲೆಯಲ್ಲಿ ನಮ್ಮ ತಂಡ ನಿಮ್ಮ ನಿವಾಸದ ಮೇಲೆ ದಾಳಿ ನಡೆಸಲಿದೆ ಎಂದು ಹೆದರಿಸಿ, ನಂತರ ಇದನ್ನು ತಡೆಗಟ್ಟಬೇಕಾದರೆ 15 ಲಕ್ಷ ರೂ ನೀಡಿ ಎಂದು ಒತ್ತಾಯಿಸಿದ್ದ. ಅದಕ್ಕೆ ಅಷ್ಟು ಹಣ ನನ್ನ ಬಳಿ ಇಲ್ಲ ಹೀಗಾಗಿ 8 ಲಕ್ಷ ರೂ ನೀಡುವುದಾಗಿ ಒಪ್ಪಿಕೊಂಡಿದ್ದೆ. ತದ ನಂತರ ಆತ ಸೂಚಿಸಿದ ಗರುಡಾಮಾಲ್ ಬಳಿ ಹೋಗಿ ಆತನಿಗೆ 5 ಲಕ್ಷ ರೂ ನೀಡಿದ್ದೆ. ನಂತರ ಹಣ ಪಡೆದ ಆತ ಕಾರಿನಲ್ಲಿ ಎನ್ ಓ ಸಿ ಇದೆ ತೆಗೆದುಕೊಂಡು ಬರುವುದಾಗಿ ಹೇಳಿ ಮೊಬೈಲ್ ಸ್ವೀಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.
ನಂತರ ತಾವು ವಂಚನೆಗೊಳಗಾಗಿರುವುದು ಗೊತ್ತಾಯಿತು ಎಂದು ಆರ್ ಟಿ ಓ ಇಲಾಖೆಯ ಅಧಿಕಾರಿ ಬಿ ಅನ್ನದಾನಯ್ಯ ಎಂಬುವವರು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶುಕ್ರವಾರ ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಸಿಂಗ್ ರಾಥೋಡ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
Advertisement