ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನನ್ನು ಬಂಧಿಸಲು 'ಓಪನ್ ಎಂಡೆಡ್ ನಾನ್ ಬೇಲೇಬಲ್ ವಾರೆಂಟ್' ಜಾರಿಗೊಳಿಸುವಂತೆ ಸಿಐಡಿ ಅಧಿಕಾರಿಗಳು ರಾಮನಗರದ ಸೆಷನ್ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಕರ್ನಾಟಕ ಹೈಕೋರ್ಟ್ ನಿತ್ಯಾನಂದನ ವಿರುದ್ಧ ಜಾಮೀನು ರದ್ಧು ಪಡಿಸಿದ್ದ ಹಿನ್ನೆಲೆಯಲ್ಲಿ ಸಿಐಡಿ ಓಪನ್ ಎಂಡೆಡ್ ನಾನ್ ಬೇಲೇಬಲ್ ವಾರೆಂಟ್ ಗೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
2010ರ ರೇಪ್ ಕೇಸ್ ಗೆ ಸಂಬಂಧಿಸಿದಂತೆ ಫೆಬ್ರವರಿ 5 ರಂದು ಕರ್ನಾಟಕ ಹೈಕೋರ್ಟ್ ನಿತ್ಯಾನಂದನ ಜಾಮೀನು ರದ್ದು ಪಡಿಸಿತ್ತು. ಜಾಮೀನು ರದ್ದುಗೊಂಡ ಹಿನ್ನೆಲೆಯಲ್ಲಿ ನಿತ್ಯಾನಂದನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ನ್ಯಾಯಾಧೀಶ ಜಾನ್ ಮೈಕೆಲ್ ಕುನ್ಹಾ ಅಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.
ಅತ್ಯಾಚಾರ, ಲೈಂಗಿಕ ಕಿರುಕುಳ, ಅಪಹರಣ, ಮಾನವ ಕಳ್ಳ ಸಾಗಾಣಿಕೆ ಆರೋಪಗಳನ್ನು ಹೊತ್ತಿರುವ ನಿತ್ಯಾನಂದ ಕಳೆದ ವರ್ಷ ಭಾರತ ಬಿಟ್ಟು ಪರಾರಿಯಾಗಿದ್ದು, ಗುಜರಾತ್ ಪೊಲೀಸರ ಒತ್ತಾಯದ ಮೇರೆಗೆ ಬ್ಲೂ ಕಾರ್ನರ್ ನೊಟೀಸ್ ಅನ್ನು ಇಂಟರ್ಪೋಲ್ ಹೊರಡಿಸಿತ್ತು.
Advertisement