ದಾವಣಗೆರೆ: ಗಣ್ಯರ ಮಕ್ಕಳ ಕಾರ್ ಕ್ರೇಜ್ಗೆ ನಡೆಯಬೇಕಿದ್ದ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಬಿಜೆಪಿ ಶಾಸಕ ರವೀಂದ್ರನಾಥ್ ಅವರ ಮೊಮ್ಮಗ ಕಾರನ್ನು ಶಾಮನೂರು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ಮನೆ ಮೇಲೆ ಬಿದ್ದಿರುವ ಘಟನೆ ಭಾನುವಾರ ತಡ ರಾತ್ರಿ ಸಂಭವಿಸಿದೆ.
ಅಪಘಾತ ಸಂಭವಿಸಿದ ವೇಳೆ ವಿದ್ಯುತ್ ಕಂಬದ ತಿಂತಿಗಳಲ್ಲಿ ವಿದ್ಯುತ್ ಪೂರೈಕೆಯಾಗುತ್ತಿತ್ತು. ಆದರೆ, ಯಾರಿಗೂ ಅಪಾಯ ಸಂಭವಿಸಲಿಲ್ಲ ಎಂದು ತಿಳಿದು ಬಂದಿದೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಪುತ್ರಿ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಅವರ ಮಗ ಅರುಣ್ ಕುಮಾರ್ ಭಾನುವಾರ ತಡ ರಾತ್ರಿ ಕಾರು ಚಲಾಯಿಸುತ್ತಿದ್ದಾಗ, ಶಾಮನೂರು ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಂಬ ಮುರಿದು ಮನೆ ಮೇಲೆ ಬಿದ್ದಿದ್ದೆ. ಈ ಕುರಿತು ಗ್ರಾಮಸ್ಥರು ಆತನನ್ನು ಪ್ರಶ್ನಿಸಲು ಮುಂದಾದಾಗ ಉದ್ರಿಕ್ತಗೊಂಡ ಅರುಣ್ ಕುಮಾರ್, ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಲು ಮುಂದಾದ್ದರು. ನಂತರ ಗ್ರಾಮಸ್ಥರೆಲ್ಲರೂ ಸೇರಿಕೊಂಡು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅರುಣ್ ಕುಮಾರ್ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಪಾಸ್ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರು ದೂರು ದಾಖಲಾಗಿದೆ.
Advertisement