ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಂಪುಟ ಪುನಾರಚನೆ ವೇಳೆ ಮಂತ್ರಿಗಿರಿ ಸಿಗಲಿದೆ: ನಿರಾಣಿ ವಿಶ್ವಾಸ

ಜೂನ್ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸವನ್ನು ಬೀಳಗಿ ಶಾಸಕ ಮುರುಗೇಶ ನಿರಾಣಿ ವ್ಯಕ್ತ ಪಡಿಸಿದ್ದಾರೆ.

ಬಾಗಲಕೋಟೆ: ಜೂನ್ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸವನ್ನು ಬೀಳಗಿ ಶಾಸಕ ಮುರುಗೇಶ ನಿರಾಣಿ ವ್ಯಕ್ತ ಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪುನಾರಚನೆ ವೇಳೆ ಸಚಿವ ಸ್ಥಾನ ಸಿಗದಿದ್ದರೂ ಅಸಮಾಧಾನವಿಲ್ಲ. 117 ಜನ ಶಾಸಕರ ಪೈಕಿ ಯಾರಿಗೆ ಸಚಿವ ಸ್ಥಾನ ನೀಡಿದರೂ ಸಂತೋಷವಿದೆ ಎಂದು ಅವರು ತಿಳಿಸಿದರು. ಕೆಲಸ ಮಾಡಲು ಸಚಿವ ಸ್ಥಾನ ಇರಬೇಕು ಎಂದೇನೂ ಇಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ನನ್ನ ನಡುವಿನದ್ದು ಮೂವತ್ತು ವರ್ಷಗಳ ಸಂಬಂಧವಿದೆ. ನಾನು ಏನು ಎನ್ನುವುದು ಬಿಎಸ್‌ವೈ ಅವರಿಗೆ ಗೊತ್ತಿದೆ. ಶಾಸಕನಾಗಿ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವೆ ಎಂದರು.

ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ್ದು ನಿಜ. ಶೆಟ್ಟರ್ ಅವರು ಕೈಗಾರಿಕೆ ಸಚಿವರಾಗಿರುವುದರಿಂದ ಕೈಗಾರಿಕೆ ಕುರಿತು ಚರ್ಚೆ ಮಾಡಿರುವೆ. ಹೊರತು ಭೇಟಿಗೆ ಯಾವುದೇ ಅಪಾರ್ಥ ಕಲ್ಪಿಸುವ ಉದ್ದೇಶವಿಲ್ಲ ಎಂದರು. ಸಿಎಎ ವಿಚಾರವಾಗಿ ಮಾತನಾಡಿದ ಅವರು ದೇಶ ವಿರೋಧಿ ಘೋಷಣೆಗಳನ್ನು ಕೂಗುವುದು ಸರಿಯಲ್ಲ. ಅಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ ನಿರಾಣಿ, ಇಲ್ಲಿ ಹುಟ್ಟಿ, ಬೆಳೆದು ಇನ್ನೊಂದು ದೇಶದ ಪರ ಘೋಷಣೆ ಕೂಗುವುದು ಯಾರಿಗೋ ಹುಟ್ಟಿ ಇನ್ನಾರದೋ ಹೆಸರು ಹೇಳುವುದು ಸರಿಯಲ್ಲ ಎಂದರು.

1500 ಕೋಟಿ ರೂ. ಬೇಡಿಕೆ 
ಇದೇ ವೇಳೆ ಬೀಳಗಿ ಮತಕ್ಷೇತ್ರಕ್ಕೆ ಕುಡಿಯುವ ನೀರು, ಹೊಸ ಪುನರ್ವಸತಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ, ಹೊಸ ನೀರಾವರಿ ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೆ ಬಜೆಟ್‌ನಲ್ಲಿ ಒಟ್ಟು 1500 ಕೋಟಿ ರೂ.ಗಳ ಬೇಡಿಕೆಗೆ ಒತ್ತಾಯಿಸುವುದಾಗಿ ಅವರು ತಿಳಿಸಿದರು. ಕೃಷ್ಣಾ ಜಲಾಶಯದ ಹಿನ್ನೀರಿನಿಂದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮುಳುಗಡೆ ಪ್ರದೇಶವಿರುವದರಿಂದ ಹಸ್ತಾಂತರಗೊಂಡ ಪುನರ್ವಸತಿ ಕೇಂದ್ರಗಳ ಮೂಲಭೂತ ಸೌಲಭ್ಯಕ್ಕಾಗಿ ಒಟ್ಟು 85 ಕೋಟಿ ರೂ.ಗಳ ಕ್ರೀಯಾ ಯೋಜನೆಯ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿದ್ದು, ಅವುಗಳ ಅನುಮೋದನೆ ಪಡೆಯಬೇಕಾಗಿದೆ. ಬೀಳಗಿ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಇರುವುದಿಲ್ಲ. ಬೀಳಗಿ ಪಟ್ಟಣ ಹಾಗೂ ಸುತ್ತಮುತ್ತಲಿನ 9 ಗ್ರಾಮಗಳು  ಒಳಗೊಂಡಂತೆ ಮುಂದಿನ 10 ವರ್ಷಗಳಿಗೆ ಜನಸಂಖ್ಯೆಯನ್ನು ಆಧರಿಸಿ 70 ಕೋಟಿ ರೂ.ಗಳ ವೆಚ್ಚದ ಕುಡಿಯುವ ನೀರಿನ ಕ್ರೀಯಾ ಯೋಜನೆಯನ್ನು ಬಜೆಟ್‌ನಲ್ಲಿ ಸೇರಿಸಲು ಪ್ರಸ್ತಾಪಿಸಲಾಗುತ್ತಿದೆ ಎಂದರು.

ನೀರು ಸಂಗ್ರಹಣೆ ಸಾಮರ್ಥ್ಯ ಹೆಚ್ಚಳ ಪ್ರಸ್ತಾಪ
70 ಕೋಟಿ ರೂ.ಗಳ ವೆಚ್ಚದ ಹೆರಕಲ್‌ನ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಪೂರ್ಣಗೊಂಡಿದ್ದು, 526 ಮೀಟರವರೆಗೆ ಗೇಟ್‌ಗಳನ್ನು ಎತ್ತರಿಸಿದ್ದರೂ 516 ವರೆಗೆ ನೀರು ನಿಲ್ಲಿಸಬಹುದಾಗಿದೆ ಆದರೆ 151 ಮೀಟರ ಎತ್ತರದಷ್ಟು ಮಾತ್ರ ನೀರು ನಿಲ್ಲಿಸಲಾಗುತ್ತಿದೆ. 516 ಮೀಟರ್‌ವರಗೆ ನೀರು ನಿಲ್ಲಿಸುವದರಿಂದ ಮುಳುಗಡೆಯಾಗುವ ಗ್ರಾಮಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. 516 ಮೀಟರವರಗೆ ನೀರು ನಿಲ್ಲಿಸುವದರಿಂದ ಇನ್ನು 3 ರಿಂದ 4 ಟಿಎಂಸಿ ನೀರು ಸಂಗ್ರಹಿಸಲಾಗುತ್ತಿರುವದರಿಂದ ಈ ಕುರಿತು ಚರ್ಚಿಸಲಾಗುತ್ತಿದೆ ಎಂದರು.  ಕಳೆದ 2012-13ನೇ ಸಾಲಿನಲ್ಲಿ ಕೆರೂರ ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ಆದರೆ  ಕಾರ್ಯರೂಪಕ್ಕೆ ಬಂದಿರುವದಿಲ್ಲ. ಹಿಂದಿನ ಸಮ್ಮಿಶ್ರ ಸರಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತಾದರೂ ಕಾರ್ಯ ಪ್ರಾರಂಭಿಸಲು ಯಾವುದೇ ರೀತಿಯ ಅನುದಾನ ನೀಡಿಲ್ಲವಾದ್ದರಿಂದ ಈ ಕಾರ್ಯಕೈಗೊಳ್ಳಲು ಬಜೆಟ್‌ನಲ್ಲಿ 600 ಕೋಟಿ ರೂ.ಗಳ ಅನುದಾನವನ್ನು ಬಜೆಟನಲ್ಲಿ ಮೀಸಲಿರಿಸಲು ಚರ್ಚಿಸುವುದಾಗಿ ತಿಳಿಸಿದರು. 

ಕಾಲುವೆಗೆ ನೀರು ಹರಿದಿಲ್ಲ
ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡು ೧೮ ವರ್ಷಗಳು ಕಳೆದರೂ ಒಮ್ಮೆಯೂ ನೀರು ಹರಿಸಿಲ್ಲ. ಹಿಡಕಲ್ ಯೋಜನೆಯ 516 ಮೀಟರ್ ವರೆಗೆ ನೀರು ನಿಲ್ಲಿಸುವದರಿಂದ 3 ರಿಂದ 4 ಟಿಎಂಸಿ ನೀರು ಹೆಚ್ಚಿಗೆ ಸಂಗ್ರಹವಾಗುತ್ತಿದ್ದು, ಈ ನೀರನ್ನು ಹೂಲಗೇರಿಯಲ್ಲಿ ಚಾಕವೆಲ್ ನಿರ್ಮಿಸುವ ಮೂಲಕ ಅಲ್ಲಿಂದ ಜಿ.ಎಲ್.ಬಿ.ಸಿ ಕಾಲುವೆಗಳಿಗೆ ನೀರು ಹರಿಸಲು 3.05 ಕೋಟಿ ರೂ.ಗಳ ಅನುದಾನ ಅಗತ್ಯವಿದ್ದು, ಅದನ್ನು ಸಹ ಬಜೆಟ್‌ನಲ್ಲಿ ಸೇರಿಸಲು ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು.

ವರದಿ: ವಿಠ್ಠಲ ಬಲಕುಂದಿ

Related Stories

No stories found.

Advertisement

X
Kannada Prabha
www.kannadaprabha.com