ದಾವಣಗೆರೆ: ದಾವಣಗೆರೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ನೀತಿ ನಿಯಮ ಪಾಲಿಸದೇ ರಾತ್ರೋರಾತ್ರಿ ವಿಧಾನಪರಿಷತ್ತು ಸದಸ್ಯರ ಮತ ಸೇರ್ಪಡೆ ಮಾಡಿ ಕರ್ತವ್ಯ ಲೋಪವೆಸಗಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಇಬ್ಬರು ಅಧಿಕಾರಿಗಲ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪಾಲಿಕೆಯ ಮತದಾರ ನೋಂದಣಾಧಿಕಾರಿ ಕೆ.ನಾಗರಾಜ್ ಹಾಗೂ ಉಪ ನೋಂದಣಾಧಿಕಾರಿ ಜಯಣ್ಣಕೆ ಅಮಾನತಾದ ಅಧಿಕಾರಿಗಳೆಂದು ಹೇಳಲಾಗುತ್ತಿದೆ. ಅಮಾನತು ವಿರೋಧಿಸಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು. ಹಿರಿಯ ಅಧಿಕಾರಿಗಳ ತಪ್ಪನ್ನು ಮುಚ್ಚಿ ಹಾಕಲು ಕಿರಿಯ ಅಧಿಕಾರಿಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಫೆ.19ರಂದು ನಡೆದ ದಾವಣಗೆರೆ ಪಾಲಿಕೆ ಮೇಯರ್ ಚುನಾವಣೆಯಲ್ಲಿ ನಕಲಿ ದಾಖಲೆಗಳನ್ನು ನೀಡಿ ಎಂಎಲ್ಸಿಗಳು ಸೇರ್ಪಡೆಯಾಗಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು.
ಅಧಿಕಾರ ಹಿಡಿಯುವ ಸಲುವಾಗಿ ಬಿಜೆಪಿ ವಾಮಮಾರ್ಗವನ್ನು ಹಿಡಿದಿದೆ. ಹೀಗಾಗಿ ಈ ರೀತಿಯ ಕುತಂತ್ರವನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಅಲ್ಲದೆ, ಮತದಾರರ ಪಟ್ಟಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮತದಾನ ಮಡುವುದು, ಬಿಡುವುದು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ತೀರ್ಪನ್ನು ಮುಂದೂಡಿತ್ತು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಜಿಲ್ಲಾಧಿಕಾರಿಗಳು ಇದೀಗ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ನೀಡಿದ್ದು, ಈ ಆದೇಶಕ್ಕೆ ಇದೀಗ ವಿರೋಧಗಳು ವ್ಯಕ್ತವಾಗುತ್ತಿವೆ.
Advertisement