ಬೆಂಗಳೂರು: 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿರುವ ಹುಬ್ಬಳ್ಳಿಯ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ನಿರಾಕರಿಸಿದ ಹುಬ್ಬಳ್ಳಿ ವಕೀಲರ ಸಂಘದ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸಂಘದ ನಿರ್ಧಾರ ಪ್ರಶ್ನಿಸಿ ಬಿ.ಟಿ.ವೆಂಕಟೇಶ್ ಸೇರಿ 24 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ನ್ಯಾಯಾಲಯದ ಆದೇಶವಿದ್ದರೂ, ವಕಾಲತ್ತು ವಹಿಸಲು ನಿರ್ಣಯಿಸಿದ ಸಂಘದ ಕ್ರಮ ನ್ಯಾಯಾಂಗ ನಿಂದನೆಯಾಗುತ್ತದೆ. ಇದು ಹೀಗೆ ಮುಂದುವರಿದಲ್ಲಿ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿತು.
ಆರೋಪಿಗಳಿಗೂ ತಮ್ಮ ಪರ ವಾದ ಮಂಡಿಸುವ ಹಕ್ಕಿದೆ. ಉಗ್ರ ಅಜ್ಮಲ್ ಕಸಾಬ್ಗೇ ಕೂಡ ವಕೀಲರನ್ನು ಒದಗಿಸಲಾಗಿತ್ತು. ಈಗ ಈ ವಿದ್ಯಾರ್ಥಿಗಳ ಪರ ವಾದ ಕೇಳದಿರಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಹುಬ್ಬಳ್ಳಿ ವಕೀಲರ ಸಂಘದ ಇಂತಹ ನಿರ್ಣಯ ಕಾನೂನುಬಾಹಿರ ಎಂದೇ ಪರಿಗಣಿಸಬೇಕಾಗುತ್ತದೆ ಎಂದಿತು.
Advertisement