ಮಂಡ್ಯ: ಸಲ್ಲಿಂಗ ಕಾಮಕ್ಕಾಗಿ ಬಾಲಕನಿಗೆ ಮರ್ಮಾಂಗ ಕತ್ತರಿಸಿಕೊಳ್ಳುವಂತೆ ಪುಸಲಾಯಿಸಿದ್ದ ಪಾಪಿಯ ಬಂಧನ

ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿ ಮರ್ಮಾಂಗ ಕತ್ತರಿಸಿದ್ದ ಪ್ರಕರಣದ ರಹಸ್ಯವನ್ನು ಪತ್ತೆಹಚ್ಚುವಲ್ಲಿ ಶ್ರೀರಂಗಪಟ್ಟಣ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿ ಮರ್ಮಾಂಗ ಕತ್ತರಿಸಿದ್ದ ಪ್ರಕರಣದ ರಹಸ್ಯವನ್ನು ಪತ್ತೆಹಚ್ಚುವಲ್ಲಿ ಶ್ರೀರಂಗಪಟ್ಟಣ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಪಾಂಡವಪುರ ತಾಲ್ಲೂಕು, ಸೀತಾಪುರ ಗ್ರಾಮದ ಸುನೀಲ್ ಕುಮಾರ್ ಅಲಿಯಾಸ್ ಸುನೀ ಗುಡ್ಡಪ್ಪ ಬಿನ್ ಕುಮಾರ(೨೮) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ``ಸಲ್ಲಿಂಗಕಾಮಕ್ಕಾಗಿ ಪ್ರಚೋದನೆ ನೀಡಿ, ಅಪ್ರಾಪ್ತ ಬಾಲಕನು ತನ್ನ ಮರ್ಮಾಂಗವನ್ನು ಕತ್ತರಿಸಿಕೊಳ್ಳುವಂತೆ ಪುಸಲಾಯಿಸಿದ್ದ ಎಂಬುದನ್ನ ಬಹಿರಂಗಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ:
ಇದೇ ಫೆ.೧೪ ರಂದು ೧೭ ವರ್ಷದ ಬಾಲಕನೊಬ್ಬ ಕಾಲೇಜಿಗೆ ಹೋಗುತ್ತಿದ್ದಾಗ ಡ್ರಾಪ್ ಕೊಡುವುದಾಗಿ ಹೇಳಿ ಬಿಳಿ ಬಣ್ಣದ ಕಾರಿನಲ್ಲಿ ಮೂರು ಜನರು ಬಂದು ಕಾರಿನಲ್ಲಿ ಬಾಲಕನನ್ನು ಹತ್ತಿಸಿಕೊಂಡು ಹರವು ಎಲೆಕೆರೆ ಗ್ರಾಮದ ರಸ್ತೆಯ, ಮೊಸಳೆ ಹಳ್ಳದ ಬಳಿ ಬಾಲಕನನ್ನು ಬಲವಂತವಾಗಿ ಹಿಡಿದುಕೊಂಡು ಆತನ ಮರ್ಮಾಂಗವನ್ನು ಕೂಯ್ದು ಕಾರಿನಿಂದ ಕೆಳಗೆ ಇಳಿಸಿ ಹೋಗಿದ್ದಾರೆ ಎಂದು ನೀಡಿದ ದೂರನ್ನು ಸ್ವೀಕರಿಸಿಕೊಂಡಿದ್ದ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ಪೊಲಿಸರು, ಮೊ.ಸಂ: ೩೫/೨೦೨೦, ಕಲಂ:೩೬೩, ೩೦೭, ೩೪ ಐಪಿಸಿ ಕೂಡ ಕಲಂ: ೧೦ ಪೋಕ್ಸೋ ಕಾಯಿದೆ ಅಡಿ ಕೇಸು ದಾಖಲಿಸಿಕೊಂಡಿದ್ದರು.

ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಅಡಿಷನಲ್.ಎಸ್.ಪಿ.,ಡಾ|| ಶೋಭಾರಾಣಿ, ಮತ್ತು ಶ್ರೀರಂಗಪಟ್ಟಣ ಆರಕ್ಷಕ ಉಪಾಧೀಕ್ಷಕ ಅರುಣ್ನಾಗೇಗೌಡ, ಮತ್ತು ವೃತ್ತ ನಿರೀಕ್ಷಕ ಕೆ.ವಿ. ಕೃಷ್ಣಪ್ಪರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪಿಎಸ್ಐ, ಗಿರೀಶ್ ಕೆ.ಎನ್. ಅವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. 

ಪ್ರಕರಣದ ತನಿಖೆ ಬೆನ್ನುಹತ್ತಿದ್ದ ಪೊಲೀಸರು``ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೊಂದ ಬಾಲಕನನ್ನು ವಿಚಾರ ಮಾಡಲಾಗಿ ಆತ ನೀಡಿದ ಹೇಳಿಕೆ ಆಧಾರದ ಮೇಲೆ, ಫೆ.೨೮ ರಂದು ಪಾಂಡವಪುರ ತಾಲ್ಲೂಕು ಸೀತಾಪುರ ಗ್ರಾಮದ ಆರೋಪಿ ಸುನೀಲ್ ಕುಮಾರ್ ಅಲಿಯಾಸ್ ಸುನೀ,  ಗುಡ್ಡಪ್ಪ ಬಿನ್ ಕುಮಾರನನ್ನು ಬಂಧಿಸಿದರು.

ವಿಚಾರಣಾ ಕಾಲದಲ್ಲಿ ಆರೋಪಿಯು ``ಸುಮಾರು ಒಂದುವರೆ ವರ್ಷಗಳಿಂದ ೧೭ ವರ್ಷದ(ನೊಂದ ) ಬಾಲಕನನ್ನು ಮನವೊಲಿಸಿ ಆತನೊಂದಿಗೆ ಪೋನ್ ನಲ್ಲಿ ಮಾತನಾಡುವುದು ಮತ್ತು ಗ್ರಾಮದ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಇಬ್ಬರೇ ಜೊತೆಯಲ್ಲೆ ಮಲಗುವುದು ಮಾಡುತ್ತಿದ್ದರು. ಆ ಸಮಯದಲ್ಲಿ ಬಾಲಕನ ಎದೆಯನ್ನು ಮುಟ್ಟುವುದು, ಆತನಿಗೆ ಮುತ್ತುಕೊಡುವುದು, ಆತನನ್ನು ಮುದ್ದಾಡುತ್ತಿದ್ದು, ಆತನ ಮರ್ಮಾಂಗವನ್ನು ಹಿಡಿದುಕೊಳ್ಳುವುದು ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ.

ಅಲ್ಲದೆ ನನಗೆ ದೇವರು ಬರುತ್ತದೆ. ನಾನು ಹೇಳಿದಂತೆ ನೀನು ಮಾಡಬೇಕು, ನಾನು ಏನು ಮಾಡಿದರು ನೀನು ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ದೇವರು ನಿನಗೆ ಶಾಪ ಕೊಡುತ್ತದೆ ಎಂದು ಬಾಲಕನನ್ನು ಹೆದರಿಸಿ, ನಂತರ ಬಾಲಕನಿಗೆ, ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನಗೆ ಇಷ್ಟ, ನೀನು ನನ್ನ ಜೊತೆಯೇ ಇರಬೇಕು ಎಂದು ಬಾಲಕನನ್ನು ಪುಸಲಾಯಿಸಿ ಒಪ್ಪಿಸಿದ್ದ. ನೀನು ನನ್ನ ಜೊತೆಯೇ ಇರಬೇಕು, ನೀನು ಇನ್ಮುಂದೆ ಮದುವೆ ಆಗಬಾರದು ನಿಮ್ಮ ಮನೆಯಲ್ಲಿ ನಿನಗೆ ಮದುವೆ ಮಾಡಬಾರದು ಎಂದರೆ, ನೀನು ನಿನ್ನ ಮರ್ಮಾಂಗವನ್ನು ಕುಯ್ದುಕೊಳ್ಳಬೇಕು ಆಗ ನಿನಗೆ ಮದುವೆ ಮಾಡುವುದಿಲ್ಲ. ಮರ್ಮಾಂಗ ಕುಯ್ದುಕೊಂಡರೆ ನಿನಗೆ ಏನು ಆಗುವುದಿಲ್ಲ. ಸ್ವಲ್ಪ ರಕ್ತ ಹೋಗುತ್ತದೆ ಮತ್ತು ಗಾಯ ಆಗುತ್ತದೆ ಸ್ವಲ್ಪ ದಿನ ಆದ ಮೇಲೆ ವಾಸಿಯಾಗುತ್ತೆ. ನೀನು ಧೈರ್ಯವಾಗಿರು. ಕುಯ್ದುಕೋ ನಾನಿದ್ದೇನೆ ಎಂದು ಕುಯ್ದಕೊಳ್ಳಲು ಚಾಕುವನ್ನು ಕೊಟ್ಟು, ಕುಯ್ದುಕೊಳ್ಳಲು ಜಾಗವನ್ನು ಸಹ ತೋರಿಸಿಕೊಟ್ಟು, ಬಾಲಕನನ್ನು ನಂಬಿಸಿ,ಪುಸಲಾಯಿಸಿ ಮರ್ಮಾಂಗವನ್ನು ಕತ್ತರಿಸಿಕೊಳ್ಳುವಂತೆ ಮಾಡಿದ್ದ. ಬಳಿಕ ಆತ ಹೇಳಿಕೊಟ್ಟಂತೆಯೇ ಬಾಲಕನು ತನ್ನ ತಂದೆ ಹಾಗೂ ಪೋಷಕರಿಗೆ ಘಟನೆಯ ಬಗ್ಗೆ ಸುಳ್ಳು ಹೇಳಿದ್ದಾನೆ. ಈ ವಾಸ್ತವಾಂಶವನ್ನು ಆರೋಪಿ ಸುನೀಲ್ ಕುಮಾರ್ ತನ್ನ ಸ್ವ ಇಚ್ಚಾ ಹೇಳಿಕೆಯನ್ನು ನೀಡಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಎಫ್ಐಆರ್ ನಲ್ಲಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಲು ತನಿಖಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ ಪಿಎಸ್ಐ, ಗಿರೀಶ್ ಕೆ.ಎನ್., ಠಾಣಾ ಸಿಬ್ಬಂದಿಗಳಾದ ಶ್ರೀನಿವಾಸಮೂರ್ತಿ.ಕೆ, ರವಿಕುಮಾರಸ್ವಾಮಿ.ಹೆಚ್.ಬಿ, ಚಂದ್ರಶೇಖರ್ ಎಸ್ಎಸ್,ಮಲ್ಲಿಕಾರ್ಜುನ,ಡಿ, ಶ್ರೀಧರ.ಎಂ.ಆರ್, ರವೀಶ,ಎಸ್ ಚಾಲಕರಾದ ಭಾರ್ಗವ ಅವರನ್ನು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com