ಕೋಲಾರ: ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾಗಿದ್ದ ಕೋಲಾರ ಮೂಲದ ಯೋಧ ಪ್ರಶಾಂತ್ ಅವರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
26 ವರ್ಷದ ವೀರ ಯೋಧ ಪ್ರಶಾಂತ್ ಫೆ.26ರಂದು ಜಮ್ಮು ಕಾಶ್ಮೀರದ ರಜೋರಿ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡು ಹುತಾತ್ಮರಾಗಿದ್ದಾರೆ.
ಶನಿವಾರ ಬಂಗಾರಪೇಟೆಯಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಜಿಲ್ಲೆಯ ಗಣ್ಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಬಾಗಿಯಾಗಿದ್ದರು.
ಬಂಗಾರಪೇಟೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಿಂದ ಯೋಧನ ಹುಟ್ಟೂರು ಕಣಿಂಬೆಲೆ ಗ್ರಾಮದ ವರೆಗೆ ತೆರದ ವಾಹನದಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರ ಮೆರವಣಿಗೆ ನಡೆಯಿತು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಹುತಾತ್ಮ ಯೋಧನ ಅಂತ್ಯ ಸಂಸ್ಕಾರ ನಡೆಸಲಾಗುವುದು.
ವಿರೋಧದ ನಡುವೆಯೂ ಸೇನೆ ಸೇರಿದ್ದ: ದೇಶದ ರಕ್ಷಣೆ, ದೇಶ ಭಕ್ತಿಯ ಅಪಾರ ಅಭಿಮಾನ ಹೊಂದಿದ್ದರಿಂದ ತಾಯಿ ಅಣ್ಣನ ವಿರೋಧದ ನಡುವೆಯೂ ದೇಶ ಕಾಯುವ ಕೆಲಸಕ್ಕೆ 2015ರಲ್ಲಿ ಹೊರಟ ಪ್ರಶಾಂತ್ ವಿದ್ಯಾರ್ಥಿ ದೆಸೆಯಿಂದಲೇ ಮಿಲಿಟರಿಗೆ ಸೇರಬೇಕೆನ್ನುವ ಬಯಕೆ ಇತ್ತು. ಹೀಗಾಗಿ ಪದವಿ ಶಿಕ್ಷಣವನ್ನು ಬದಿಗೊತ್ತಿ ನಾಲ್ಕು ವರ್ಷಗಳಿಂದ ದೇಶದ ನಾನಾ ಕಡೆ ಸೇನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು.
ಪ್ರಶಾಂತ್ ಅವರು ಜಮ್ಮುವಿನ 17 ನೇ ಮದ್ರಾಸ್ ರೆಜಿಮೆಂಟ್ನಲ್ಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಕುಟುಂಬಸ್ಥರಿಗೆ ಕೆಲವು ದಿನದ ಹಿಂದೆ ಮಾಹಿತಿ ಬಂದಿತ್ತು. ತಾಯಿ ಲಕ್ಷತ್ರ್ಮಮ್ಮ ಮತ್ತು ಅಣ್ಣ ಮಂಜು ಅವರು ಸೇನೆಯಲ್ಲಿರುವ ಪ್ರಶಾಂತ್ ಅವರನ್ನು ನೋಡಿಕೊಂಡು ಬರಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಸಾವನ್ನಪ್ಪಿರುವ ಸುದ್ದಿ ತಿಳಿದಿದೆ.
Advertisement