ಚಿಕ್ಕಮಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ನಿಂಧಿಸಿ ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಮತ್ತೆ ದೊರೆಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಪುರಾವೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಬಾಲಾಕೋಟ್ ವಾಯುದಾಳಿ ನಡೆದಾಗ ಪ್ರತಿಯೊಬ್ಬರು ಪುರಾವೆ ಕೇಳಿದ್ದರು. ಈಗ ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪುರಾವೆ ಕೇಳುವುದರಲ್ಲಿ ತಪ್ಪೇನಿಲ್ಲ ಎಂದರು.
ದೊರೆಸ್ವಾಮಿ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಕರೆದ ಯತ್ನಾಳ್, ಕನ್ಹಯ್ಯ ಕುಮಾರ್, ಅಸಾದುದ್ದೀನ್ ಓವೈಸಿ ಮತ್ತಿತರಿಗೆ ದೊರೆಸ್ವಾಮಿ ಏನು ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಪೋಟೋಗಳನ್ನು ಬಿಡುಗಡೆ ಮಾಡಿದರು.
ಗಾಂಧಿ ಸಿದ್ಧಾಂತಗಳಿಗೆ ವಿರುದ್ಧವಾಗಿ ದೊರೆಸ್ವಾಮಿ ವರ್ತಿಸಿದ್ದಾರೆ. ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಟೀಕಿಸುವ ದೊರೆಸ್ವಾಮಿ ಅಂತಹವರಿಗೆ ಮಾಧ್ಯಮಗಳು ಪ್ರಚಾರ ನೀಡಬಾರದು ಎಂದು ಯತ್ನಾಳ್ ಹೇಳಿದರು.
ಸಿದ್ದರಾಮಯ್ಯ, ಎಚ್ ಡಿಕುಮಾರಸ್ವಾಮಿ ಹಾಗೂ ಯುಟಿ ಖಾದರ್ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದೊರೆಸ್ವಾಮಿ ನೀಡಿರುವ ಹೇಳಿಕೆಗಳನ್ನು ಕ್ಷಮಿಸಲು ಸಾಧ್ಯವಿಲ್ಲ, ಏಕೆಂದರೆ ಅವರು ಪ್ರಧಾನ ಮಂತ್ರಿಯನ್ನು ನಿರಂತರವಾಗಿ ಟೀಕಿಸುತ್ತಾರೆ"
ಯತ್ನಾಳ್ ಅವರನ್ನು ಬೆಂಬಲಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ, ದೊರೆಸ್ವಾಮಿ ಅವರನ್ನು ಪಾಕಿಸ್ತಾನ ಏಜೆಂಟ್ ಎಂದು ಕರೆಯುವುದಿಲ್ಲ ಆದರೆ, ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಾಗಿ ತಿಳಿಸಿದರು.
Advertisement